ಬೆಳಗಾವಿ: ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಆಡುವ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಆದ್ಮೇಲೂ ಹೇಳಿದ ಮಾತಿನಿಂದ ಒಳಗೊಳಗೆ ಚರ್ಚೆಗಳು ನಡೆದಿತ್ತು. ಇದೀಗ ಅದೇ ನಾಯಕತ್ವದ ಬಗ್ಗೆ ಒಗಟಾಗಿ ನುಡಿದಿದ್ದಾರೆ. ಸಿಎಂ ಹಾಗೂ ಡಿಸಿಎಂಗೂ ಅಧಿಕಾರ ಶಾಶ್ವತ ಅಲ್ಲ ಎಂದಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ಇರ್ತೀನಿ ಅಂತ ಡಿಕೆಶಿ ಹೇಳಿದ್ದಾರೆ. ಕುರ್ಚಿ ಕದನದಲ್ಲಿ ದೆಹಲಿಗೆ ಹೋದರು ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗಿಲ್ಲ. ಆ ಕಾರಣದಿಂದ ಡಿಕೆ ಶಿವಕುಮಾರ್ ಅವರು ಈ ಮಾತನ್ನ ಹೇಳಿದ್ದರು. ಇದೇ ಮಾತಿಗೆ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ನಾವೆಲ್ಲರೂ ಕೂಡ ಸಾಮಾನ್ಯ ಕಾರ್ಯಕರ್ತರೆ. ಸಾಮಾನ್ಯ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕು. ಅಧಿಕಾರ ಏನು ಬರುತ್ತೆ. ಅದು ನಮಗೆ ಶಾಶ್ವತ ಅಲ್ಲ. ಪಕ್ಷ ಹೇಳುವ ಕೆಲಸ ಮಾಡಬೇಕು ಅಂತ ಹೇಳಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಲಿ, ಮಂತ್ರಿಗಳಿಗಾಗಲೀ ಯಾವುದು ಶಾಶ್ವತ ಅಲ್ಲ. ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರೇ ಎಂದಿದ್ದಾರೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ವಿಚಾರಕ್ಕೆ ಒಂದು ಮಾತನ್ನ ಹೇಳಿದ್ದರು. ನಾನು ಪಕ್ಷದ ಕಾರ್ಯಕರ್ತನಾಗಿ ಕಸ ಕೂಡ ಗುಡಿಸಿದ್ದೀನಿ ಅಂತ. ಅಧಿಕಾರ ಸಿಗದೆ ಇದ್ದರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೇ ಸದಾ ಇರ್ತೇನೆ ಎಂದಿದ್ದರು. ಈ ಮಾತಿಗೆ ಯತೀಂದ್ರ ಅವರು ತಿರುಗೇಟು ನೀಡಿದ್ರಾ ಎಂಬ ಅನುಮಾನ ಕಾಡುತ್ತಿದೆ. ಜನವರಿ 6 ಅಥವಾ 9 ರಂದು ಡಿಕೆ ಶಿವಕುಮಾರ್ ಸಿಎಂ ಆಗಬಹುದು ಎಂಬ ಚರ್ಚೆಗಳು ನಡೆಯುತ್ತೇವೆ. ಹೀಗಾಗಿಯೇ ಎಲ್ಲರ ಚಿತ್ತ ಜನವರಿ 6 ರತ್ತ ಇದೆ.





