ಸುದ್ದಿಒನ್, ಚಿತ್ರದುರ್ಗ.ಸೆ.01: ಮುಂದಿನ ಒಂದು ವಾರದಲ್ಲಿ ಚಿತ್ರದುರ್ಗ,ಹೊಳಲ್ಕೆರೆ, ಮೊಳಕಾಲ್ಮೂರು ತಾಲ್ಲೂಕುಗಳು ಸಹ ಕೇಂದ್ರ ನಿಯಮಾವಳಿಗಳ ಪ್ರಕಾರ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಲಿವೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ತಮ್ಮನ್ನು ಭೇಟಿಯಾದ ಜಿಲ್ಲೆಯ ರೈತ ಮುಖಂಡರೊಂದಿಗೆ ಈ ಕುರಿತು ಚರ್ಚಿಸಿದರು.

ಬರ ಘೋಷಣೆ ವಿಚಾರದಲ್ಲಿ ಸಾರ್ವಜನಿಕರು ಹಾಗೂ ರೈತರಲ್ಲಿ ಇರುವ ಗೊಂದಲಗಳಿಗೆ ತೆರೆ ಎಳೆದ ಸಚಿವರು, ಬರ ಘೋಷಣೆ ಮಾಡುವುದು ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ, ಕೇಂದ್ರ ಸರ್ಕಾರದ ‘ಬರ ನಿರ್ವಹಣೆ ಕೈಪಿಡಿ 2020’ ರ ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿ ರೂಪಿಸಿರುವ ಮಾನದಂಡಗಳ ಆಧಾರದ ಮೇಲೆ ಬರ ನಿರ್ಧಾರವಾಗುತ್ತದೆ ಎಂದರು.
ಬರಪೀಡಿತ ಎಂದು ಘೋಷಿಸಲು ಮೊದಲನೆಯದಾಗಿ ಶೇ 60ಕ್ಕಿಂತ ಹೆಚ್ಚಿನ ಮಳೆ ಕೊರತೆ ಇರಬೇಕು. ಸತತ ಮೂರು ವಾರಗಳ ಕಾಲ ಶುಷ್ಕ ವಾತಾವರಣ ಇರಬೇಕು. ಈ ಹಿಂದೆ ಪಟ್ಟಿ ಘೋಷಿಸುವಾಗ ಜೂನ್ನಿಂದ ಆಗಸ್ಟ್ 12ರವರೆಗಿನ ಅವಧಿಯಲ್ಲಿ ಸತತ ಮೂರು ವಾರಗಳ ಕಾಲ ಮಳೆಯಾಗದೆ ಶುಷ್ಕ ಅವಧಿ ಇದ್ದ ತಾಲ್ಲೂಕುಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಬರ ಪಟ್ಟಿ ಘೋಷಣೆಯಲ್ಲಿ ಯಾವುದೇ ರಾಜಕೀಯ ಪಕ್ಷಪಾತವಾಗಲಿ ಅಥವಾ ಅಧಿಕಾರಿಗಳ ನಿರ್ಲಕ್ಷ್ಯವಾಗಲಿ ನಡೆದಿಲ್ಲ. ಯಾವುದೇ ರಾಜಯಕೀಯ ಲಾಭಕ್ಕಾಗಿ ತಾಲ್ಲೂಕುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲು ಆಗುವುದಿಲ್ಲ. ಇವೆಲ್ಲಾ ಉಹಾಪೋಹದ ಮಾತುಗಳು. ರೈತರು ಇವುಗಳಿಗೆ ಕಿವಿಗೊಡಬಾರದು ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.
ರಾಜ್ಯದ 25 ಜಿಲ್ಲೆಗಳ 175 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಕೇಂದ್ರ ಸರ್ಕಾರದ ಮಾನದಂಡಗಳಡಿ 101 ತಾಲ್ಲೂಕುಗಳನ್ನು ಘೋಷಿಸಲಾಗಿದೆ. ಇದರಲ್ಲಿ 89 ತಾಲ್ಲೂಕುಗಳಲ್ಲಿ ತೀವ್ರ ಹಾಗೂ 12 ತಾಲ್ಲೂಕುಗಳಲ್ಲಿ ಸಾಧಾರಣ ಬರ ಪರಸ್ಥಿತಿ ತಲೆದೊರಿದೆ.
ಜಿಲ್ಲೆಯ ಬಿಟ್ಟುಹೋಗಿರುವ ಮೂರು ತಾಲ್ಲೂಕುಗಳಲ್ಲಿಯೂ ಸಹ ಶುಷ್ಕವಾತಾರಣ ದಾಖಲಾಗಿದೆ. ಈ ಬಗ್ಗೆ ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ ವರದಿ ನೀಡಲಾಗಿದೆ. ನಿಯಮಾವಳಿಗಳ ಪ್ರಕಾರ ಶೀಘ್ರದಲ್ಲೇ ಬರ ಪೀಡತ ತಾಲ್ಲೂಕುಗಳು ಎಂದು ಘೋಷಿಸಲಾಗುವುದು ಎಂದು ಸಚಿವ ಟಿ.ರಘೂಮೂರ್ತಿ ಪುರುಚ್ಛರಿಸಿದರು.
ಈ ವೇಳೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ , ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸೇರಿದಂತೆ, ರೈತ ಮುಖಂಡರು ಇದ್ದರು.











