ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ.ಆ. 12 : ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ, ಮಾಶಾಸನ, ಪಿಂಚಣಿ ಪಡೆಯಲು 32000-00 ರೂ.ಗಳ ಒಳಗೆ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ಫಲಾನುಭವಿಗಳಿಗೆ ಸರ್ಕಾರದಿಂದ ಕೇಳಿರುವುದನ್ನು ರದ್ದುಪಡಿಸಬೇಕು, ಹಾಗೂ ಪಿಂಚಣಿ ಮಾಸಾಸನಗಳನ್ನು ಕನಿಷ್ಠ ರೂ.5,000 ಗಳನ್ನು ಹೆಚ್ಚಿಗೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಕೆ.ಕೆ.ಎನ್.ಎಸ್.ಎಸ್. ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ.ಯ ಅಧ್ಯಕ್ಷರಾದ ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವೃದ್ದಾಪ್ಯ ವೇತನ, ಸಂಧ್ಯಾಸುರಕ್ಷಾ, ಇಂದಿರಾಗಾಂಧಿ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇನ್ನಿತರೆ ಮಾಶಾಸನಗಳನ್ನು ಸರ್ಕಾರದ ವತಿಯಿಂದ ಹಾಲಿ ಪಡೆಯುತ್ತಿದ್ದು, ಫಲಾನುಭವಿಗಳಿಗೆ ಈಗಾಗಲೇ ತಹಶೀಲ್ದಾರ್ ಕಛೇರಿಯಿಂದ ಸುಮಾರು 30000 ರಿಂದ 32000 ಸಾವಿರ ಒಳಗೆ ಆದಾಯ ದೃಢೀಕರಣಪತ್ರವನ್ನು ಪಡೆದು ಸಲ್ಲಿಸಬೇಕೆಂದು ತಿಳಿಸಿದ್ದು, ಈ ಯೋಜನೆಯಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಗಳಲ್ಲಿ ಫಲಾನುಭವಿಗಳಿಗೆ ಮಾಶಾಸನ ಬಾರದೇ ನಿಲ್ಲಿಸಿರುವುದರಿಂದ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿರುತ್ತದೆ. ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಯಾವುದೇ ನಿಬಂಧನೆಗಳು ಇಲ್ಲದೇ ವಯಸ್ಸಾದವರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, ಇನ್ನು ಇತರೆಯವರಿಗೆ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ನೀಡುವುದು ನ್ಯಾಯಯುತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಮಾನದಂಡಗಳನ್ನು ಸರ್ಕಾರ ವಿಧಿಸಿರುವುದರಿಂದ ಕೂಲಿ-ನಾಲಿ ಮಾಡಿಕೊಂಡು ಜೀವನ ಮಾಡಲು ಆಗದೇ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಸರ್ಕಾರ ಯಾವುದೇ ಮಾನದಂಡಗಳನ್ನು ಮತ್ತು ಆದಾಯ ಮಿತಿಯನ್ನು ಹೇರದೇ ಮಾಶಾಸನವನ್ನು ನೀಡಲು ಮುಂದುವರೆಸಬೇಕು ಮತ್ತು ಈ ಕೂಡಲೇ ಜಾರಿ ಮಾಡಿ ನಿಂತಿರುವ ಮಾಶಾಸನಗಳನ್ನು ಕೂಡಲೇ ನೀಡಬೇಕು ಹಾಗೂ ಈಗ ಹಾಲಿ ನೀಡುತ್ತಿರುವ ಮಾಶಾಸನವನ್ನು ಕನಿಷ್ಠ ರೂ.5000ಗಳಿಗೆ ಹೆಚ್ಚಿಸಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ರುದ್ರಮುನಿ, ಅಂಜಿನಯ್ಯ, ಶಬಿನಾಜಾನು, ಲೀಲಾವತಿ ಚಂದ್ರಮ್ಮ ಗೀತಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.









