ಚಿತ್ರದುರ್ಗ. ಮೇ.01: ಚಿತ್ರದುರ್ಗ ಆಕಾಶವಾಣಿ ಕಾರ್ಯಾರಂಭ ಮಾಡಿ ಮೇ.03 ಭಾನುವಾರಕ್ಕೆ 35 ವರ್ಷ ಪೂರ್ಣವಾಗುತ್ತಿದ್ದು, ಅಂದು ಶ್ರೋತೃಗಳಿಗಾಗಿ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಬೆಳಿಗ್ಗೆ 8:30ಕ್ಕೆ ಜಿಲ್ಲೆಯ ಕವಯಾತ್ರಿಯರು ಸೃಷ್ಟಿಸಿದ ಆಕಾಶವಾಣಿ ಕಾವ್ಯಧಾರೆ, ಬೆಳಿಗ್ಗೆ 9.05ಕ್ಕೆ ಉದಯೋನ್ಮುಖ ಬರಹಗಾರ್ತಿ ದೀಪಿಕಾ ಮಾರಘಟ್ಟ ಅವರಿಂದ ಆಕಾಶವಾಣಿ ಕುರಿತು ವಿಚಾರ ಲಹರಿ, ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಸಂಗೀತಕ್ಷೇತ್ರದ ಉದಯೋನ್ಮುಖ ಯುವ ಪ್ರತಿಭೆಗಳಾದ ಹಸೀನಾ ಬೇಗಂ ಹಾಗೂ ಸಂಗೀತ. ಎಸ್.ಪ್ರಸ್ತುತ ಪಡಿಸುವ ವೈವಿದ್ಯಮಯ ಸಂಗೀತ ಕಾರ್ಯಕ್ರಮ ಬಿತ್ತರವಾಗಲಿದೆ.
ನಿರಂಜನ ಮೂರ್ತಿ ಆರ್ ಪಂಡರಹಳ್ಳಿ ಕಾರ್ಯಕ್ರಮಗಳನ್ನು ಸಂಕಲಿಸಲಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿ ನಿಲಯದಲ್ಲಿ ಯುವ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. 35ನೇ ವರ್ಷಾಚರಣೆ ಸಂಭ್ರಮದಲ್ಲಿ ನಿಲಯದ ಎಲ್ಲಾ ಉದ್ಘೋಷಕರು, ಪ್ರಸಾರ ಸಹಾಯಕರು, ತಾಂತ್ರಿಕ ವಿಭಾಗ ಹಾಗೂ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಲಿದ್ದಾರೆ.


















