ಬೆಂಗಳೂರು: ತಂದೆಯ ಕಾರಿನಡಿ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ವಿದ್ರಾವಕ ಘಟನೆ ನಡೆದಿರುವುದು ಬೆಂಗಳೂರಿನ ಬೆನಕ ಲೇಔಟ್ ನಲ್ಲಿ. ಮೃತ ಮಗುವಿಗೆ ಕೇವಲ ಒಂದು ವರ್ಷ 10 ತಿಂಗಳಾಗಿತ್ತು. ಈ ದುರ್ಘಟನೆಯಿಂದ ಆ ತಂದೆಯ ಮನಸ್ಥಿತಿ ಎಷ್ಟು ನೊಂದಿರಬೇಡ.
ಮೃತ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಕಾರು ತೆಗೆಯಲು ಬಂದ ತಂದೆಯೂ ಮಗುವನ್ನು ಗಮನಿಸಿಲ್ಲ. ಕಾರು ಚಲಾಯಿಸುತ್ತಿದ್ದಂತೆ ಮಗು ಕಾರಿನ ಚಕ್ರಕ್ಕೆ ಸಿಲುಕಿದೆ. ಕಾರಿನ ಚಕ್ರಕ್ಕೆ ಸಿಲುಕಿ ತನ್ನ ಪುಟ್ಟ ಜೀವವನ್ನೇ ಕಳೆದುಕೊಂಡಿದೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗವನ್ನ ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಅದರಲ್ಲೂ ಅಷ್ಟು ಪುಟ್ಟ ಮಗುವನ್ನು ಪೋಷಕರು ಎಷ್ಟೆಲ್ಲಾ ಕಾಳಜಿಯಿಂದ ಬೆಳೆಸಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಮೃತ ನೂತನ್ ಅಂದ್ರೆ ಮನೆಯವರಿಗೆಲ್ಲಾ ಇನ್ನಿಲ್ಲದ ಪ್ರೀತಿ. ಅಷ್ಟೇ ಮುದ್ದಾಗಿ ಸಾಕಿ ಸಲಹಿದ್ದರು. ಆದರೆ ವಿಧಿ ಬರಹ ಆ ಮಗುವನ್ನು ಈ ರೂಪದಲ್ಲಿ ಕರೆದುಕೊಂಡಿದೆ. ಅದರಲ್ಲೂ ತಂದೆಯಿಂದಾನೇ ಮಗು ಸಾವನ್ನಪ್ಪಿದ್ದು ದುರಾದೃಷ್ಟ. ಗೊತ್ತಿಲ್ಲದೆ ಆದ ತಪ್ಪಿಗೆ ಆ ತಂದೆಯ ಮನಸ್ಸು ಕೂಡ ಕೊರಗುತ್ತಿರುತ್ತದೆ. ಆ ನೋವನ್ನ ಮರೆಯುವುದಕ್ಕೆ ಅಸಾಧ್ಯವೇ ಸರಿ.


