ಚಳ್ಳಕೆರೆ | ವಿಷಜಂತು ಕಚ್ಚಿ ಬಾಲಕ ಸಾವು

1 Min Read

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 25 : ಮಳೆಗಾಲ ಬೇರೆ ಇದೆ. ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಾ ಇರುತ್ತವೆ. ಅದರಲ್ಲೂ ಜಮೀನು ಗಳಿಗೆ ಹೋಗುವವರು, ಜಮೀನಿನಲ್ಲಿರುವ ಮನೆಗಳಲ್ಲಿ ಮಲಗುವವರು ಎಚ್ಚರದಿಂದ ಇರಬೇಕು. ಜಮೀನಿನಲ್ಲಿರುವ ಮನೆಗಳನ್ನು ಕ್ಲೀಸ್ ಮಾಡದೆ ಇದ್ದಲ್ಲಿ ಮಲಗುವುದಕ್ಕೆ ಹೋಗಬೇಡಿ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಚಳ್ಳಕೆರೆಯಲ್ಲಿ ನಡೆದ ಘಟನೆ.

ಜಮೀನಿನ ಶೆಡ್ ಒಂದರಲ್ಲಿ ಮಲಗಿದ್ದ ಬಾಲಕ ಈಗ ಶವವಾಗಿ ಬಿದ್ದಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರವಿತೇಜ ಹೀಗೆ ಸತ್ತು ಮಲಗಿರುವುದು. ಈ ಬಾಲಕನಿಗೆ ಈಗಿನ್ನು ಕೇವಲ 8 ವರ್ಷ. ಆಟವಾಡಿಕೊಂಡಿದ್ದವ ಈಗ ಜೀವಂತವಾಗಿಲ್ಲ. ಅದಕ್ಕೆ ಕಾರಣ, ಜಮೀನಿಗೆ ಹೋಗಿ ಶೆಡ್ ನಲ್ಲಿ ಮಲಗಿದ್ದಷ್ಟೇ.

ಎಂಟು ವರ್ಷದ ಮೃತ ರವಿತೇಜ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದವರು. ಸಿದ್ದಾಪುರದ ಬಳಿಯೇ ಇವರದ್ದು ಜಮೀನು ಇದೆ. ಆ ಜಮೀನಿನಲ್ಲಿ ಏನಾದರು ವಸ್ತುಗಳನ್ನು ಹಾಕುವುದಕ್ಕೆಂದು ಶೆಡ್ ನಿರ್ಮಾಣ‌ ಮಾಡಿದ್ದಾರೆ. ಇತ್ತೀಚೆಗೆ ಒಂದೇ ಸಮನೆ ಮಳೆ ಬಂದು ಈಗ ಎರಡ್ಮೂರು ದಿನದಿಂದ ವಿಶ್ರಾಂತಿ ನೀಡಿದೆ. ಕೊಂಚ ಬಿಸಿಲು ತಟ್ಟಿದೆ. ಇಂದು ಭಾನುವಾರವೂ ಆದ ಕಾರಣ ಬಾಲಕ ಜಮೀನಿಗೆ ಹೋಗಿದ್ದಾನೆ. ಮಧ್ಯಾಹ್ನದ ಸಮಯ ಆಗಿದ್ದರಿಂದ ನಿದ್ದೆ ಬಂದಿದೆ. ತಮ್ಮ ಜಮೀನಿನಲ್ಲಿಯೇ ಶೆಡ್ ಇದ್ದ ಕಾರಣ ಬಾಲಕ ಸೀದಾ ಹೋಗಿ ಶೆಡ್ ನಲ್ಲಿ ಮಲಗಿದ್ದಾನೆ. ಆದರೆ ಅದ್ಯಾವ ವಿಷ ಜಂತು ಕಚ್ಚಿತೋ ಏನೋ, ಬಾಲಕ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಜಮೀನಿಗೆ ಹೋದ ಬಾಲಕ ಸೀದಾ ಮನೆಗೆ ಬಂದಿದ್ದರೆ ಜೀವಂತವಾಗಿ ಆದ್ರೂ ಇರುತ್ತಿದ್ದ. ಆದರೆ ವಿಧಿ ಶೆಡ್ ನಲ್ಲಿ ಯಾವುದೋ ವಿಷ ಜಂತು ಕಚ್ಚಿ ಪ್ರಾಣವನ್ನೇ ಬಲಿ ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *