ಸುದ್ದಿಒನ್, ಹಿರಿಯೂರು, ಏಪ್ರಿಲ್. 15 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದ ಜಾತಿ ಗಣತಿ ಅತ್ಯಂತ ಅವೈಜ್ಞಾನಿಕತೆಯಿಂದ ಕೂಡಿದ್ದು, ಮುಸ್ಲಿಂ ಸಮುದಾಯವನ್ನು ಓಲೈಸುವ ಜಾತಿಗಣತಿಯಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಸರ್ಕಾರದ ದರ ಏರಿಕೆ, ಸಾಲು ಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖವನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಬೇರೆಡೆ ಸೆಳೆಯುವ ಜಾತಿ ಸಂಚು ರೂಪಿಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಪ್ರಬಲ ಜಾತಿಗಳಿದ್ದಾಗ ಮುಸ್ಲಿಂರ ಸಂಖ್ಯೆ ಹೇಗೆ ಹೆಚ್ಚಳವಾಗುತ್ತದೆ. ಎಂದು ಪ್ರಶ್ನಿಸಿದರು. ಲಿಂಗಾಯತ, ವೀರಶೈವ ಲಿಂಗಾಯತ ಮತ್ತು ಇನ್ನಿತರ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ. ರಾಜ್ಯದಲ್ಲಿ ಸುಮಾರು 25ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯವಿದೆ. ಅದರಲ್ಲೂ ಕಾಡುಗೊಲ್ಲರು 3,10,393 ಜನಸಂಖ್ಯೆ ತೋರಿಸಲಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಒಳಗೊಂಡಂತೆ ಜಿಲ್ಲೆಯಲ್ಲಿ 2ಲಕ್ಷ ಕಾಡುಗೊಲ್ಲರಿದ್ದಾರೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲೂ ಎರಡೂವರೆ ಲಕ್ಷ ಜನಸಂಖ್ಯೆ ಒಳಗೊಂಡಿದೆ. ಉಳಿದಂತೆ ದಾವಣಗೆರೆ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲೂ ನಮ್ಮ ಸಮುದಾಯ ಇದೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುವ ಕಾಡುಗೊಲ್ಲರು ಪ್ರತಿ ಕ್ಷೇತ್ರದಲ್ಲಿ 10 ಸಾವಿರದಂತೆ ಲೆಕ್ಕಾಚಾರ ಹಾಕಿದರೂ 4ಲಕ್ಷ ಆಗುತ್ತದೆ. ಆದರೆ ಜಾತಿ ಗಣತಿಯಲ್ಲಿ 3,10,393 ಸಂಖ್ಯೆ ಹೇಗೆ ಆಗುತ್ತದೆ ಎಂದರು. ಜೊತೆಗೆ ನಿಮ್ಮ ಜಾತಿ ಗಣತಿ ನಡೆಯುವ ಸಂದರ್ಭದಲ್ಲಿ ನಮ್ಮ ಹಟ್ಟಿಗಳಿಗೆ ಭೇಟಿ ನೀಡಿಲ್ಲ, ನಿಮ್ಮ ಜಾತಿ ಗಣತಿ ಸಮರ್ಪಕವಾಗಿ ನಡೆದಿಲ್ಲ. ಮತ್ತೊಮ್ಮೆ ಮರು ಜಾತಿ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು.


