ಸುದ್ದಿಒನ್,ಬೆಂಗಳೂರು,ಮೇ.08: ಪತ್ನಿ ಕೇವಲ ಕೆಲವೇ ತಿಂಗಳುಗಳ ಕಾಲ ಪತಿಯ ಜೊತೆ ವಾಸಿಸಿದ್ದರು ಎಂಬ ಕಾರಣ ನೀಡಿ ಆಕೆಗೆ ಜೀವನಾಂಶ ನಿರಾಕರಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೆಂಗಳೂರಿನ 24 ವರ್ಷದ ಮಹಿಳೆಯೊಬ್ಬರು ತನ್ನ ಪತಿಯಿಂದ ಮಾಸಿಕ 50,000 ರೂ. ಜೀವನಾಂಶ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 1 ಲಕ್ಷ ರೂ. ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಯು ದುಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 8 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ ಎಂದು ಪತ್ನಿ ವಾದಿಸಿದ್ದರು.

ಆದರೆ, ಪತ್ನಿ ಕೇವಲ 6 ರಿಂದ 7 ತಿಂಗಳು ಮಾತ್ರ ನನ್ನ ಜೊತೆಗಿದ್ದಳು, ಹೀಗಾಗಿ ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ” ಎಂದು ಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಾದವನ್ನು ಆಲಿಸಿದ್ದ ಕೌಟುಂಬಿಕ ನ್ಯಾಯಾಲಯವು ಪತ್ನಿಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಮುಖ್ಯ ಉದ್ದೇಶವೇ ಸಂಕಷ್ಟದಲ್ಲಿರುವ ಸಂಗಾತಿಗೆ ಆರ್ಥಿಕ ನೆರವು ನೀಡುವುದು ಮತ್ತು ಕಾನೂನು ಹೋರಾಟ ನಡೆಸಲು ಶಕ್ತಿ ತುಂಬುವುದಾಗಿದೆ. ದಂಪತಿಗಳು ಎಷ್ಟು ಕಾಲ ಜೊತೆಯಲ್ಲಿದ್ದರು ಎನ್ನುವುದಕ್ಕಿಂತ, ಅರ್ಜಿದಾರರಿಗೆ ಆರ್ಥಿಕ ನೆರವಿನ ಅಗತ್ಯವಿದೆಯೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ ಎಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ಪೀಠವು ಕೆಳಹಂತದ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಪತ್ನಿಯು ನಿರುದ್ಯೋಗಿ ಎಂಬ ಅಂಶ ಮತ್ತು ಪತಿಯ ಆದಾಯದ ದಾಖಲೆಗಳನ್ನು ಪರಿಗಣಿಸಿ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ.


















