ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಮೇ. 26 : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರ ಸಭೆಯನ್ನು ಕರೆದು ಕೂಡಲೇ ಬೆಳೆ ವಿಮೆ, ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಪ್ರತಿಭಟನೆಯನ್ನು ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ರೈತ ಸಭೆಯನ್ನು 2 ಬಾರಿ ಆಯೋಜನೆ ಮಾಡಿ ರದ್ದು ಮಾಡಿರುತ್ತಾರೆ. ಜಿಲ್ಲೆಯ ರೈತರಿಗೆ ಅವಮಾನಿಸಿದಂತೆ ರೈತರ ಅನೇಕ ದುರಂತ ಸಮಸ್ಯೆಗಳಿದ್ದು, ಸಭೆಯ ಮುಖಾಂತರ ಚರ್ಚಿಸಲು ಕೂಡಲೇ ಈ ತಿಂಗಳ 31ರ ಒಳಗಾಗಿ ರೈತರ ಸಭೆಯನ್ನು ಕರೆಯಬೇಕು. 2024ರಲ್ಲಿ ಈರುಳ್ಳಿ ನಷ್ಟವಾಗಿದ್ದರೂ ಪರಿಹಾರ ಬಂದಿರುವುದಿಲ್ಲ. ಕೃಷಿ ಇಲಾಖೆಯಿಂದ ತೊಗರಿಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ ರೈತರಿಗೆ ಹೂ ಕಾಯಿ ಬಿಟ್ಟಿರುವುದಿಲ್ಲ. ಇಂತಹ ರೈತರಿಗೆ ಪರಿಹಾರ ಬಂದಿರುವುದಿಲ್ಲ. ಚಳ್ಳಕೆರೆ ತಾಲ್ಲೂಕಿಗೆ ಬೆಳೆ ವಿಮೆ ಬಂದಿರುವುದಿಲ್ಲ ಹಾಗೂ ಚಳ್ಳಕೆರೆಯ ದೇವರಹಳ್ಳಿಯ ರೈತರ ಜಮೀನಿನಲ್ಲಿ ಕೆಪಿಟಿಸಿಎಲ್ ಇಲಾಖೆಯು ರೈತರ ಜಮೀನಿನಲ್ಲಿ ದೊಡ್ಡ ದೊಡ್ಡ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, 4 ವರ್ಷ ಆದರೂ ಪರಿಹಾರ ಬಂದಿರುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಕೂಡಲೇ ರೈತ ಸಭೆಯನ್ನು ಕರೆದು ಸೂಕ್ತ ಪರಿಹಾರ ನೀಡಬೇಕು ತಡವಾದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಚಿತ್ರದುರ್ಗ ಜಿಲ್ಲಾ ರೈತ ಸಂಘ ವತಿಯಿಂದ ಘೇರಾವು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಮುಖಂಡರುಗಳಾದ ಗೌಸ್ ಪೀರ್, ಹಿರಿಯೂರು ಯುವ ಅಧ್ಯಕ್ಷ ಚೇತನ ಯಳನಾಡು, ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಕಲ್ಪನಾ, ಡಾ.ಲಕ್ಷ್ಮಣ್, ಹೊರಕೇರಪ್ಪ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ ಜಾನುಕೂಂಡ, ಮಂಜುನಾರ್ಥ, ಪಾಪಣ್ಣ, ಬಸ್ತಿಹಳ್ಳಿ ಸುರೇಶ್ ಬಾಬು, ಸುಧಾ, ಮುನಿಸ್ವಾಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


