ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷದ ಸಾಧನೆ ಅಂಗವಾಗಿ ಚಿತ್ರದುರ್ಗ ನಗರದ ಹೊರವಲಯದ ಮದಾರ ಚೆನ್ನಯ್ಯ ಗುರುಪೀಠದ ಸಮೀಪ ಶನಿವಾರ ಅದ್ಧೂರಿಯಾಗಿ ‘ಬಿಎಸ್ವೈ ಅಭಿಮಾನೋತ್ಸವ’ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಅಭಿಮಾನಿಗಳು ಹರಿದುಬಂದು ಕಾರ್ಯಕ್ರಮವನ್ನು ಭವ್ಯ ಜನಸಾಗರವಾಗಿ ಪರಿವರ್ತಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಹಿರಿಯ ಬಿಜೆಪಿ ನಾಯಕರು ಹಾಗೂ ನಾಡಿನ ಅನೇಕ ಮಠಾಧೀಶರು ಭಾಗವಹಿಸಿದ್ದರು. ವೇದಿಕೆಯ ಸುತ್ತ ಅಭಿಮಾನಿಗಳ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಜೈಕಾರಗಳು ಮೊಳಗಿದವು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ನಗರ ಮತ್ತು ಹೊರವಲಯದ ಹೆದ್ದಾರಿಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಸುಮಾರು 40 ಕಿಲೋಮೀಟರ್ ವ್ಯಾಪ್ತಿವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಅಭಿಮಾನಿಗಳನ್ನು ನಿಯಂತ್ರಿಸಿ ಸಂಚಾರ ಸುಗಮಗೊಳಿಸಲು ಪೊಲೀಸರು ಮತ್ತು ಸ್ವಯಂಸೇವಕರು ಹರಸಾಹಸ ಪಟ್ಟರು.

ಕಾರ್ಯಕ್ರಮದ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಭರ್ಜರಿ ಊಟ ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ, ವಡೆ, ಸಾಂಬಾರ್ ವಿತರಿಸಲಾಯಿತು. ಬಳಿಕ ಟೊಮ್ಯಾಟೋ ಬಾತ್, ಪಲಾವ್, ಮೊಸರನ್ನ ಹಾಗೂ ಮೈಸೂರುಪಾಕ್ ನೀಡಲಾಯಿತು. ಸಾವಿರಾರು ಜನರು ಊಟ ಸವಿದು ಸಂತೋಷ ವ್ಯಕ್ತಪಡಿಸಿದರು.ಇದಲ್ಲದೆ ಪೆಂಡಾಲ್ನೊಳಗಿನ ಜನರಿಗೆ ಬ್ರೆಡ್, ದಿಲ್ಕುಷ್, ಬಾಳೆಹಣ್ಣು, ನೀರಿನ ಬಾಟಲ್ಗಳು ಹಾಗೂ ಮಜ್ಜಿಗೆ ಪ್ಯಾಕೆಟ್ಗಳನ್ನು ಕುಳಿತಲ್ಲೇ ವಿತರಿಸಲಾಯಿತು. ಬಿಸಿಲಿನ ತಾಪದಿಂದ ರಕ್ಷಿಸಲು ಬೃಹತ್ ಫ್ಯಾನ್ಗಳು ಮತ್ತು ಏರ್ ಕೂಲರ್ಗಳನ್ನು ಅಳವಡಿಸಲಾಗಿತ್ತು.
ಕಾರ್ಯಕ್ರಮದ ಸಿದ್ಧತೆಗಾಗಿ ಕಳೆದ 15 ದಿನಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ವಿವಿಧ ಸಮಿತಿಗಳ ಮೂಲಕ ಕಾರ್ಯನಿರ್ವಹಿಸಿದ್ದರು. ಹಲವಾರು ಹಾಲಿ ಹಾಗೂ ಮಾಜಿ ಶಾಸಕರು ಜವಾಬ್ದಾರಿ ಹಂಚಿಕೊಂಡು ವ್ಯವಸ್ಥೆ ನೋಡಿಕೊಂಡರು.
ಕಾರ್ಯಕ್ರಮದ ವೇಳೆ ಅಭಿಮಾನಿಗಳು ನಾಯಕರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ವಿಶೇಷವಾಗಿ ಅಮಿತ್ ಶಾ ಭಾಷಣದ ವೇಳೆ “ಮೋದಿ.. ಮೋದಿ..” ಘೋಷಣೆಗಳು ಮೊಳಗಿದವು. ಚಿತ್ರದುರ್ಗದಲ್ಲಿ ನಡೆದ ಈ ಅಭಿಮಾನೋತ್ಸವ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದ ಭವ್ಯ ಸಮಾವೇಶವಾಗಿ ಪರಿಣಮಿಸಿತು.

















