Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದೇಶಿ ದೇಣಿಗೆಯಿಂದ ಮತಾಂತರ ಚಟುವಟಿಕೆಗಳಿಗೆ ನಿಷೇಧ; FCRA ನಿಯಮ ಮತ್ತಷ್ಟು ಕಠಿಣಗೊಳಿಸಿ ಕೇಂದ್ರ ಸರ್ಕಾರ ಆದೇಶ

---Advertisement---

ದೆಹಲಿ.ಜೂನ್.23: ದೇಶದ ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಮತ್ತು ಬಳಸುವ ನಿಯಮಗಳನ್ನು ಕೇಂದ್ರ ಗೃಹ ಸಚಿವಾಲಯವು ಮತ್ತಷ್ಟು ಕಠಿಣಗೊಳಿಸಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳಿಗೆ ತಿದ್ದುಪಡಿ ತಂದಿರುವ ಸರ್ಕಾರ, ಧಾರ್ಮಿಕ ಮತ್ತು ನಂಬಿಕೆ ಆಧಾರಿತ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರೂ, ‘ಮತಾಂತರ’ (Proselytisation) ಚಟುವಟಿಕೆಗಳನ್ನು ಈ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಟ್ಟಿದೆ. ಈ ಕುರಿತು ಸೋಮವಾರ ತಡರಾತ್ರಿ ಅಧಿಕೃತ ಗ್ಯಾಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಭಾರತೀಯ ಮೂಲದವರನ್ನು ಹೊರತುಪಡಿಸಿ ಇತರ ವಿದೇಶಿ ಪ್ರಜೆಗಳು ಪ್ರಮುಖ ಪದಾಧಿಕಾರಿಗಳಾಗಿರುವ ಸಂಸ್ಥೆಗಳಿಗೆ ವಿದೇಶಿ ಹಣ ಪಡೆಯಲು ಸಾಮಾನ್ಯವಾಗಿ ನೋಂದಣಿ ಅಥವಾ ಮುಂಚಿತ ಅನುಮತಿ ನೀಡಲಾಗುವುದಿಲ್ಲ. ಆದರೆ, ವಿಶೇಷ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ಇದಕ್ಕೆ ವಿನಾಯಿತಿ ನೀಡಬಹುದಾಗಿದೆ.

ಪ್ರಮುಖ ಪದಾಧಿಕಾರಿ ಎಂಬ ಪದದ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಕಂಪನಿ ನಿರ್ದೇಶಕರು, ಪಾಲುದಾರರು, ಟ್ರಸ್ಟಿಗಳು, ಹಿಂದೂ ಅವಿಭಕ್ತ ಕುಟುಂಬದ ‘ಕರ್ತ’ ಮತ್ತು ಸಂಸ್ಥೆಯ ನಿರ್ವಹಣೆಯ ಮೇಲೆ ನಿಯಂತ್ರಣ ಹೊಂದಿರುವ ಯಾವುದೇ ವ್ಯಕ್ತಿಯನ್ನು ಇದು ಒಳಗೊಳ್ಳುತ್ತದೆ.
ಇನ್ನು ಮುಂದೆ ವಿದೇಶಿ ಧನಸಹಾಯ ಪಡೆಯಲು ಇಚ್ಛಿಸುವ ಎನ್‌ಜಿಒಗಳು ತಾವು ಕಾರ್ಯನಿರ್ವಹಿಸುವ ನಿಖರವಾದ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ಉದ್ದೇಶವನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ನಿಯಮಗಳಲ್ಲಿ ಒದಗಿಸಲಾದ ನಿಗದಿತ ಪಟ್ಟಿಯಿಂದಲೇ (ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಅಥವಾ ಸಾಮಾಜಿಕ) ಉದ್ದೇಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಧಾರ್ಮಿಕ ಸ್ಥಳಗಳ ನಿರ್ಮಾಣ, ಜೀರ್ಣೋದ್ಧಾರ, ಧಾರ್ಮಿಕ ಶಿಕ್ಷಣ, ಸತ್ಸಂಗ, ಧ್ಯಾನ ಶಿಬಿರಗಳು ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗೆ ಅವಕಾಶವಿದ್ದರೂ, ಇವುಗಳಲ್ಲಿ ‘ಮತಾಂತರ’ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಹೊರಗಿಡಲಾಗಿದೆ.ಅಸ್ತಿತ್ವದಲ್ಲಿರುವ ಸಂಸ್ಥೆಗಳಿಗೆ ತಮ್ಮ ನೋಂದಣಿಯಲ್ಲಿ ನಿರ್ದಿಷ್ಟ ಉದ್ದೇಶ ಮತ್ತು ರಾಜ್ಯಗಳನ್ನು ಬಹಿರಂಗಪಡಿಸಲು ಒಂದು ವರ್ಷದ ಸಮಯ ನೀಡಲಾಗಿದೆ. ಅರ್ಜಿಯಲ್ಲಿ ಪ್ರತಿ ಹೆಚ್ಚುವರಿ ರಾಜ್ಯ ಅಥವಾ ಉದ್ದೇಶವನ್ನು ಸೇರಿಸಲು ₹300 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ನಿಷ್ಕ್ರಿಯ ಎನ್‌ ಜಿಒಗಳು ಲೈಸೆನ್ಸ್ ಉಳಿಸಿಕೊಳ್ಳುವುದನ್ನು ತಡೆಯಲು ಸರ್ಕಾರ ನಿಯಮ ರೂಪಿಸಿದೆ. ಸಂಸ್ಥೆಗಳು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕನಿಷ್ಠ ₹10 ಲಕ್ಷ ವಿದೇಶಿ ದೇಣಿಗೆಯನ್ನು ತಮ್ಮ ಉದ್ದೇಶಿತ ಚಟುವಟಿಕೆಗಳಿಗೆ ಖರ್ಚು ಮಾಡಿರಬೇಕು. ಇಲ್ಲದಿದ್ದರೆ ನೋಂದಣಿ ನವೀಕರಣಗೊಳ್ಳುವುದಿಲ್ಲ. ‘ಮುಂಚಿತ ಅನುಮತಿ’ ಅಡಿಯಲ್ಲಿ ಹಣ ಪಡೆಯುವ ಸಂಸ್ಥೆಗಳು, ತಮಗೆ ಸಿಕ್ಕ ಹಿಂದಿನ ಕಂತಿನ ಕನಿಷ್ಠ 75% ಹಣವನ್ನು ಬಳಸಿದ ನಂತರವೇ ಮುಂದಿನ ಕಂತು ಬಿಡುಗಡೆಯಾಗಲಿದೆ. ಇದರ ಪರಿಶೀಲನೆಗಾಗಿ ಸರ್ಕಾರವು ಕ್ಷೇತ್ರ ತನಿಖೆ (Field inquiry) ನಡೆಸಲಿದೆ.

ಸಾಮಾಜಿಕ ಜಾಲತಾಣ ಮತ್ತು ದಾನಿಗಳ ವಿವರ ಕಡ್ಡಾಯ: ಎನ್‌ಜಿಒಗಳು ತಮ್ಮ ಸಾಮಾಜಿಕ ಜಾಲತಾಣಗಳ (Social Media) ವಿವರಗಳನ್ನು ನೀಡಬೇಕಾಗುತ್ತದೆ. ಮಧ್ಯವರ್ತಿಗಳು ಅಥವಾ ‘ಡೋನರ್-ಅಡ್ವೈಸ್ಡ್ ಫಂಡ್ಸ್’ ಮೂಲಕ ಹಣ ಬಂದರೆ, ಅಂತಿಮ ದಾನಿ (ಮೂಲ ದಾನಿ) ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಜೊತೆಗೆ ವಾರ್ಷಿಕ ರಿಟರ್ನ್ಸ್ ಸಲ್ಲಿಸುವಾಗ ಆರ್ಥಿಕ ಹೇಳಿಕೆಯೊಂದಿಗೆ ‘ವಿವರವಾದ ಚಟುವಟಿಕೆ ವರದಿ’ಯನ್ನು ನೀಡಬೇಕು.

ಎನ್‌ ಜಿಒಗಳು ತಾವು ಪ್ರಕಟಿಸುವ ಪುಸ್ತಕಗಳು ಅಥವಾ ಲೇಖನಗಳ ವಿವರಗಳನ್ನು ಘೋಷಿಸಬೇಕಾಗುತ್ತದೆ. ಯಾವುದೇ ರೀತಿಯ “ಸುದ್ದಿ ಅಥವಾ ಪ್ರಚಲಿತ ವಿದ್ಯಮಾನಗಳ” ಪ್ರಸಾರ ಅಥವಾ ಉತ್ಪಾದನೆಯನ್ನು ಇವು ಮಾಡುವಂತಿಲ್ಲ.

ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗದಂತೆ ವಿದೇಶಿ ಹಣದ ಒಳಹರಿವನ್ನು ನಿಯಂತ್ರಿಸಲು 2010ರ ಎಫ್‌ಸಿಆರ್‌ಎ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಈಗಾಗಲೇ 2016, 2018 ಮತ್ತು 2020ರಲ್ಲಿ ತಿದ್ದುಪಡಿ ತರಲಾಗಿದೆ.

ಇದೀಗ 2026ರ ತಿದ್ದುಪಡಿ ಮಸೂದೆಯ ಮೂಲಕ, ಲೈಸೆನ್ಸ್ ರದ್ದಾಗುವ ಎನ್‌ಜಿಒಗಳ ಆಸ್ತಿಯನ್ನು ವಶಪಡಿಸಿಕೊಳ್ಳಲು ‘ನಿಯೋಜಿತ ಪ್ರಾಧಿಕಾರ’ವನ್ನು ನೇಮಿಸುವ ಪ್ರಸ್ತಾವನೆಯನ್ನೂ ಸರ್ಕಾರ ಮುಂದಿಟ್ಟಿದ್ದು, ಇದು ಮುಂಬರುವ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now