ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಪೀಡಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಗ್ಯಾಸ್ಟ್ರಿಕ್. ಎಷ್ಟೇ ಔಷಧ ತೆಗೆದುಕೊಂಡರೂ ತಾತ್ಕಾಲಿಕ ಉಪಶಮನ ಸಿಗುತ್ತದೆಯೇ ಹೊರತು ಶಾಶ್ವತ ಪರಿಹಾರ ಸಿಗುವುದು ಕಷ್ಟ. ಆದರೆ, ನಾವು ಸೇವಿಸುವ ದಿನನಿತ್ಯದ ಕೆಲವು ತರಕಾರಿ ಮತ್ತು ಹಣ್ಣುಗಳ ಬಗ್ಗೆ ಕೊಂಚ ಜಾಗ್ರತೆ ವಹಿಸಿದರೆ ಈ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬಳಸುವ ಎಲೆಕೋಸು (ಕ್ಯಾಬೇಜ್) ಸುಲಭವಾಗಿ ಜೀರ್ಣವಾಗದ ತರಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಎಲೆಕೋಸು ತಿನ್ನುವುದರಿಂದ ಹೊಟ್ಟೆಯಲ್ಲಿ ತೀವ್ರ ಸೆಳೆತ ಉಂಟಾಗುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ಅದೇ ರೀತಿ, ಎಲ್ಲರ ನೆಚ್ಚಿನ ತರಕಾರಿಯಾದ ಆಲೂಗಡ್ಡೆ ಸಹ ಗ್ಯಾಸ್ಟ್ರಿಕ್ ಪೀಡಿತರಿಗೆ ಅಷ್ಟೊಂದು ಒಳ್ಳೆಯದಲ್ಲ. ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದಲ್ಲಿರುವ ಪಿಷ್ಟವು (ಸ್ಟಾರ್ಚ್) ಜೀರ್ಣಕ್ರಿಯೆಯ ವೇಗವನ್ನು ಕುಗ್ಗಿಸುತ್ತದೆ. ಅದರಲ್ಲೂ ಆಲೂಗಡ್ಡೆಯನ್ನು ವಿವಿಧ ಕಾಳುಗಳ ಜೊತೆ ಬೇಯಿಸಿ ತಿಂದರಂತೂ ಹೊಟ್ಟೆ ಉಬ್ಬರ ಹಾಗೂ ಅನಿಲದ ಸಮಸ್ಯೆ ಇಮ್ಮಡಿಕೊಳ್ಳುತ್ತದೆ.

ದೇಹಕ್ಕೆ ತಂಪು ನೀಡುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಜೀರ್ಣಾಂಗ ವ್ಯವಸ್ಥೆಯ ತೊಂದರೆ ಇರುವವರು ಜಾಗ್ರತೆ ವಹಿಸಬೇಕು. ಕಲ್ಲಂಗಡಿಯಲ್ಲಿ ನೀರು ಮತ್ತು ಖನಿಜಾಂಶ ಹೆಚ್ಚಾಗಿದ್ದರೂ, ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಮೇನಿಟಾಲ್ ಎಂಬ ಅಂಶಗಳು ಕರುಳಿನ ಜೀರ್ಣಕ್ರಿಯೆಗೆ ಅಡ್ಡಿಪಡಿಸಿ ಹೊಟ್ಟೆ ಉಬ್ಬರಿಸುವಂತೆ ಮಾಡುತ್ತವೆ.
ಇನ್ನು ಸಾಲಾಡ್ ರೂಪದಲ್ಲಿ ಹೆಚ್ಚಾಗಿ ಬಳಸುವ ಸೌತೆಕಾಯಿಯನ್ನು ಸೇವಿಸುವ ಸಮಯದ ಮೇಲೆಯೂ ಗಮನವಿಡುವುದು ಅಗತ್ಯ. ಸೌತೆಕಾಯಿಯಲ್ಲಿ ನೀರು ಹಾಗೂ ನಾರಿನಂಶ ಹೇರಳವಾಗಿದ್ದರೂ, ಇದನ್ನು ರಾತ್ರಿ ವೇಳೆ ಸೇವಿಸುವುದು ಸೂಕ್ತವಲ್ಲ. ರಾತ್ರಿ ಸೌತೆಕಾಯಿ ತಿಂದರೆ ಜೀರ್ಣಕ್ರಿಯೆ ಮಂದಗತಿಯಲ್ಲಿ ಸಾಗಿ ಗ್ಯಾಸ್ಟ್ರಿಕ್ ಉಲ್ಬಣಗೊಳ್ಳಲು ದಾರಿಯಾಗುತ್ತದೆ.









