ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎರಡನೇ ಬಾರಿ ಅರೆಸ್ಟ್ ಆಗಿದ್ದಾರೆ. ಆದರೆ ಜೈಲಿನಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಒದ್ದಾಡುತ್ತಿದ್ದಾರೆ. ಬೆನ್ನು ನೋವು ಮೊದಲೇ ಇದೆ, ಮೊಣ ಕೈ ನೋವು ಕೂಡ ಅವರನ್ನ ಕಾಡುತ್ತಿದೆ. ಹೀಗಾಗಿ ದಿಂಬು, ಹಾಸಿಗೆ ಬೇಕು ಎಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ. ಕೋರ್ಟ್ ಕೂಡ ಮೂಲಭೂತ ಸೌಲಭ್ಯ ಕೊಡಿ ಎಂದು ಹೇಳಿತ್ತು. ಆದರೂ ಕೊಟ್ಟಿಲ್ಲ ಎಂಬ ವಾದ ದರ್ಶನ್ ಅವರದ್ದು. ನಮ್ಮ ವ್ಯಾಪ್ತಿಗೆ ಎಷ್ಟು ಸಾಧ್ಯವೋ ಅಷ್ಟನ್ನ ನೀಡಿದ್ದೀವಿ ಅನ್ನೋದು ಜೈಲು ಅಧಿಕಾರಗಳ ಮಾತು. ಕಡೆಗೆ ಕೋರ್ಟ್ ಅಧಿಕಾರಿಗಳು ಜೈಲಿಗೆ ಹೋಗಿ ವೀಕ್ಷಣೆ ಮಾಡಿ ಬಂದಿದ್ದಾರೆ.
ಸದ್ಯ ಅಂದು ಜೈಲಿನಲ್ಲಿ ಸೌಲಭ್ಯದ ಬಗ್ಗೆ ಪರಿಶೀಲನೆ ಮಾಡಿದ ವರದಿಯನ್ನು ಇಂದು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಆ ವರದಿಯಲ್ಲಿ, ದರ್ಶನ್ ಬ್ಯಾರಕ್ ನಲ್ಲಿ 1 ಇಂಡಿಯನ್, 1 ವೆಸ್ಟರ್ನ್ ಟಾಯ್ಲೆಟ್ ಇದೆ. ಹಾಸಿಗೆ, ದಿಂಬು ಕೊಟ್ಟಿಲ್ಲವೆಂಬ ಆರೋಪವಿದೆ. ಆದರೆ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಅವಕಾಶವಿಲ್ಲ. ಬಿಸಿಲಿಗೆ ಓಡಾಡಲು ಬಿಡುತ್ತಿಲ್ಲ ಎನ್ನುವುದಕ್ಕೆ ನಿಯಮದಂತೆ ಒಂದು ಗಂಟೆ ವಾಕಿಂಗ್ ಆಟವಾಡಲು ಅವಕಾಶ ನೀಡಬಹುದು. ಆದರೆ ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರೆ ಬ್ಯಾರಕ್ ನವರು ಕಿರುಚುತ್ತಾರೆ, ಅಕ್ಕಪಕ್ಕದ ಅಪಾರ್ಟ್ಮೆಂಟ್ ಅವರು ಫೋಟೋಗಳನ್ನು ತೆಗೆಯಬಹುದು ಎಂಬ ಕಾರಣಕ್ಕೆ ಆಕ್ಷೇಪಣೆ ಇದೆ. ಜೈಲಿನ ಶಿಸ್ತುಪಾಲನೆ, ನಿರ್ವಹಣೆ ಹೊರತುಪಡಿಸಿ ವಾಕಿಂಗ್, ಆಟಕ್ಕೆ ಅವಕಾಶ ನೀಡಬೇಕು. ಫಂಗಸ್ ವಿಚಾರಕ್ಕೆ, ಕಾಲಿಗೆ ಫಂಗಸ್ ಬಂದಿಲ್ಲ, ಹಿಮ್ಮಡಿಯಲ್ಲಿ ಬಿರುಕು ಮೂಡಿದೆ. ಈ ಬಗ್ಗೆ ಚರ್ಮರೋಗ ತಜ್ಞೆ ಜ್ಯೋತಿ ಬಾಯಿ ಅವರಿಂದ ತಪಾಸಣೆ ಮಾಡಿಸಲಾಗುತ್ತಿದೆ. ವಾರಕ್ಕೆ ಎರಡು ಬಾರಿ ವೈದ್ಯರಿಂದ ಫಿಸಿಯೋಥೆರಪಿ ನಡೆಯುತ್ತಿದೆ ಎಂದಿದ್ದಾರೆ.
ಸದ್ಯ ಕೋರ್ಟ್ ಅಧಿಕಾರಿಗಳಿಂದ ಸಲ್ಲಿಕೆಯಾಗಿರುವ ವರದಿಯಲ್ಲೂ ಹಾಸಿಗೆ, ದಿಂಬು ನೀಡುತ್ತಿರುವ ಉಲ್ಲೇಖವಿಲ್ಲ. ದರ್ಶನ್ ಪರ ವಕೀಲರ ವಾದವೇ ಹಾಸಿಗೆ, ದಿಂಬು ನೀಡಿ ಎಂಬುದಾಗಿದೆ. ಮುಂದಿನ ವಿಚಾರಣೆಯಲ್ಲಿ ಇದಕ್ಕೊಂದು ಸ್ಪಷ್ಟ ಉತ್ತರ ಸಿಗಲಿದೆ.





