ರಾಯಚೂರು : ಈ ಹಿಸ ವರ್ಷ ರಾಯರ ಭಕ್ತರಿಗಂತು ಇನ್ನಿಲ್ಲದ ಸಂಭ್ರಮ. ಯಾಕಂದ್ರೆ ವರ್ಷದ ಮೊದಲ ದಿನವೇ ಗುರುವಾರ ಬಂದಿದೆ. ಖುಷಿಯಾಗದೆ ಇರುತ್ತದೆಯೇ. ಅವರಿಷ್ಟದ ರಾಯರನ್ನ ನೋಡುವುದಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಹೀಗಾಗಿ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಈ ವರ್ಷ ಪ್ರತಿ ವರ್ಷಕ್ಕಿಂತ ಎರಡು ಪಟ್ಟು ಭಕ್ತರು ಹೆಚ್ಚಾಗಿದ್ದಾರೆ.
ಮಾಮೂಲಿ ದಿನದಲ್ಲಿಯೇ ಭಕ್ತರು ಹೆಚ್ಚಾಗಿರುತ್ತಾರೆ. ಇನ್ನು ವರ್ಷದ ಆರಂಭದಲ್ಲಿ ರಾಯರನ್ನ ನೋಡುವುದಕ್ಕೆ ಇನ್ನೆಷ್ಟು ಜನ ಬರಬೇಡ. ಹೀಗಾಗಿಯೇ ಮಠದಲ್ಲಿಯೂ ಸರಿಯಾದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಬಾಗಿಲುಗಳಲ್ಲೂ ಭಕ್ತರು ಒಳ ಹೋಗುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಲಕ್ಷಾಂತರ ಮಂದಿ ಮಠಕ್ಕೆ ಬಂದು, ರಾಯರ ದರ್ಶನ ಮಾಡಿ, ವರ್ಷವಿಡಿ ಒಳಿತು ಮಾಡು ತಂದೆ ಎಂದು ಬೇಡಿಕೊಂಡಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮಠದ ಕೊಠಡಿ, ಪ್ರಸಾದ ವ್ಯವಸ್ಥೆಯಲ್ಲಿ ವ್ಯತ್ಯಯವಾಗುತ್ತಿದೆ. ದೇಶ, ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಾಯರ ದರ್ಶನಕ್ಕೆ ಸಾವಿರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದು, ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಯುತ್ತಿದ್ದಾರೆ. ವರ್ಷದ ಮೊದಲನೇ ದಿನ ರಾಘವೇಂದ್ರ ಸ್ವಾಮಿಗಳ ಅನುಗ್ರಹವಾದರೆ, ಇಡೀ ವರ್ಷ ಒಳಿತಾಗುತ್ತದೆ ಅನ್ನೋ ನಂಬಿಕೆಯಲ್ಲಿ ಭಕ್ತರು ಬಂದಿದ್ದಾರೆ. ನಿನ್ನೆಯಷ್ಟೇ ರಾಯರ ಮಠದ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಭಕ್ತರು ತಮ್ಮ ಭಕ್ತಿಗೆ ಅನುಸಾರವಾಗಿ ಕಾಣಿಕೆಯನ್ನ ರಾಯರಿಗೆ ಸಮರ್ಪಣೆ ಮಾಡಿದ್ದರು. ಇಂದು ಹೊಸ ವರ್ಷದ ಹಾದಿಯಲ್ಲಿ ಭಕ್ತ ಸಮೂಹವೇ ರಾಯರ ಮಠಕ್ಕೆ ಭೇಟಿ ನೀಡಿದೆ. ವರ್ಷದಲ್ಲಿ ಎರಡು ಬಾರಿಯಾದರೂ ರಾಯರ ದರ್ಶನ ಮಾಡಿದರೆ ತೃಪ್ತಿ ಎನ್ನುತ್ತಾರೆ ಭಕ್ತರು. ಇನ್ನು ವರ್ಷದ ಮೊದಲ ದಿನವೇ ಗುರುವಾರ ಬಂದರೆ ಅವರಿಗೆ ಖುಷಿಯಾಗದೆ ಇರುತ್ತಾ.















