ಕವಾಡಿಗರ ಹಟ್ಟಿ ಅಭಿವೃದ್ದಿಗೆ ಕ್ರಮ :  ನಗರಸಭೆ ಆಯುಕ್ತೆ ರೇಣುಕಾ ಸ್ಪಷ್ಟನೆ

2 Min Read

ಚಿತ್ರದುರ್ಗ ಜೂ. 18 : ನಗರದ ಹೊರ ವಲಯದಲ್ಲಿರುವ ಕವಾಡಿಗರ ಹಟ್ಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿದ್ದು, ತ್ವರಿತ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ತಿಳಿಸಿದ್ದಾರೆ.

 

ಕಳೆದ ವರ್ಷ ಕವಾಡಿಗರ ಹಟ್ಟಿಯಲ್ಲಿ ಕುಡಿಯುವ ನೀರಿನ ಕಾರಣದಿಂದ ಜರುಗಿದ ಅಹಿತಕರ ಘಟನೆಯ ಬಳಿಕ ಕವಾಡಿಗರ ಹಟ್ಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಗೆ ಸರ್ಕಾರ 3.07 ಕೋಟಿ ರೂ. ಒದಗಿಸಿ, ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.  ಮಂಡಳಿಯ ಕಾರ್ಯಪಾಲಕ ಅಭಿಯಂತರರು ಒಂದು ತಿಂಗಳ ಒಳಗಾಗಿ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.  ಕವಾಡಿಗರ ಹಟ್ಟಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳುವ ಕಾಮಗಾರಿಗೆ ಈಗಾಗಲೆ ಅನುಮೋದನೆ ದೊರೆತಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ವಿಳಂಬವಾಗಿರುತ್ತದೆ.

ಇಲ್ಲಿನ ಎ.ಕೆ. ಕಾಲೋನಿಯಲ್ಲಿ ಸದ್ಯ ಒಳಚರಂಡಿ ಸಂಪರ್ಕ ಇಲ್ಲದಿರುವ ಮನೆಗಳಿಗೆ 20 ಲಕ್ಷ ರೂ. ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ, ತೆರೆದ ಚರಂಡಿಗಳನ್ನು 25 ಲಕ್ಷ ರೂ. ವೆಚ್ಚದಲ್ಲಿ ಭಾಗಶಃ ಪುನರ್ ನಿರ್ಮಿಸಿ ಭಾಗಶಃ ಹಾಳಾಗಿರುವೆಡೆ ಸರಿಪಡಿಸುವುದು ಮತ್ತು ಪುನರ್ ನಿರ್ಮಿಸುವುದು ಹಾಗೂ 38 ಲಕ್ಷ ರೂ. ವೆಚ್ಚದಲ್ಲಿ 60 ಆಸನಗಳ ಸಾಮೂಹಿಕ ಶೌಚಾಲಯ ನಿರ್ಮಾಣ ಮತ್ತು ನೀರಿನ ಸಂಪರ್ಕ, ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ.  ಕವಾಡಿಗರ ಹಟ್ಟಿ ಬಳಿ ರಸ್ತೆ ಅಗಲೀಕರಣದಿಂದ ತೊಂದರೆಗೊಳಗಾಗುವ 59 ಮನೆಗಳ ಪಟ್ಟಿಯನ್ನು ಈಗಾಗಲೆ ಸಿದ್ಧಪಡಿಸಿದ್ದು, ನಗರಸಭೆಯಿಂದ ಖರೀದಿಸಿರುವ 03 ಎಕರೆ ಪ್ರದೇಶದಲ್ಲಿ ಇವರಿಗೆ ನಿವೇಶನ ಹಂಚಲು ತೀರ್ಮಾಣಿಸಲಾಗಿದೆ.

ಈಗಾಗಲೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ನಕ್ಷೆ ಅನುಮೋದನೆ ಪಡೆದು, ರಸ್ತೆ ಮತ್ತು ಚರಂಡಿ ಮಾಡಿ ನಿವೇಶನ ಗುರುತಿಸಲಾಗಿದೆ.  ಬರುವ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿನ ಆಶ್ರಯ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು ಹಕ್ಕುಪತ್ತ ನೀಡಲು ಕ್ರಮ ವಹಿಸಲಾಗಿದೆ.  ಕವಾಡಿಗರ ಹಟ್ಟಿಯಲ್ಲಿ ಈಗಾಗಲೆ ಗ್ರಾಮೀಣ ನೀರು ಸರಬರಾಜು ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು, ಕಾರ್ಯ ನಿರ್ವಹಿಸುತ್ತಿದೆ.

ಕವಾಡಿಗರ ಹಟ್ಟಿ ಪ್ರದೇಶಕ್ಕೆ ಸರಬರಾಜು ಮಾಡುವ ನೀರನ್ನು ನಿಯಮಿತವಾಗಿ ಪರೀಕ್ಷೆ ಒಳಪಡಿಸಲಾಗುತ್ತಿದ್ದು, ಕಳೆದ ಜೂ. 07 ರಂದು ಕೈಗೊಂಡ ಪರೀಕ್ಷೆಯಲ್ಲಿ ಇಲ್ಲಿನ ಕುಡಿಯುವ ನೀರು ಯೋಗ್ಯವಾಗಿದೆ ಎಂಬ ವರದಿ ಬಂದಿದೆ.  ಹಟ್ಟಿಯ ಸ್ವಚ್ಛತೆಗೆ ಸಂಬಂಧಿಸಿದಂತೆ ಈಗಾಗಲೆ ಚರಂಡಿ ಮತ್ತು ರಸ್ತೆಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತಿದ್ದು, ಜನರು ಕಸವನ್ನು ಎಲ್ಲೆಂದರಲ್ಲಿ ಸುರಿಯದೆ, ನಗರಸಭೆಯ ವಾಹನಗಳಿಗೇ ನೀಡಬೇಕೆಂದು ಇಲ್ಲಿನ ಜನರಲ್ಲಿ ಅರಿವು ಮೂಡಿಸಲಾಗತ್ತಿದೆ.  ಕವಾಡಿಗರ ಹಟ್ಟಿಯ ಸ್ವಚ್ಛತೆಗೆ ಜನರ ಸಹಕಾರವೂ ಅಗತ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *