ಬೆಂಗಳೂರು; ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮತ್ತೆ ಭಿನ್ನಾಭಿಪ್ರಾಯ ಹೆಚ್ಚಾಗಿದೆಯಂತೆ. ಅದರಲ್ಲೂ ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಗೆ ಹಿರಿಯ ಇಂಜಿನಿಯರ್ ಗಳ ವರ್ಗಾವಣೆ ವಿಚಾರಕ್ಕೆ ಸಿಎಂ ಹಾಗೂ ಡಿಸಿಎಂ ನಡುವೆ ಮನಸ್ತಾಪ ಮೂಡಿದೆ ಎಂದೇ ಹೇಳಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಇಲಾಖೆಗೆ ಸಂಬಂಧಿಸಿದಂತೆ ವರ್ಗಾವಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಮಾಡಬಾರದೆಂಬ ವಿರೋಧ ಕೇಳಿ ಬಂದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲನ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಮಗೆ ತುರ್ತಾಗಿ ಇಂಜಿನಿಯರ್ ಗಳು ಬೇಕಾಗಿದೆ. ಈಗ ಜಲಸಂಪನ್ಮೂಲ ಇಲಾಖೆಯಲ್ಲಿ ಹೆಚ್ಚು ಇಂಜಿನಿಯರ್ ಗಳು ಇಲ್ಲ. ಹೀಗಾಗಿ ನಮ್ಮ ಇಲಾಖೆಯಿಂದ ಯಾರನ್ನು ಬೇರೆಡೆಗೆ ಕಳುಹಿಸಬೇಡಿ ಎಂದು ಪತ್ರ ಬರೆದಿದ್ದೇನೆ. ನಮ್ಮ ಇಲಾಖೆಗೆ ಬಂದು ಬಡ್ತಿ ಪಡೆದ ನಂತರ ಲೋಕೋಪಯೋಗಿ, ಜಿಲ್ಲಾ ಪಂಚಾಯತಿ ಸೇರಿದಂತೆ ಇತರ ಇಲಾಖೆಗಳಿಗೆ ವರ್ಗಾವಣೆ ಪಡೆಯುತ್ತಾರೆ. ಉನ್ನತ ಮಟ್ಟದಲ್ಲಿ ಈ ರೀತಿ ವರ್ಗಾವಣೆ ಮಾಡಲು ಅವಕಾಶವಿದೆ. ಅನೇಕ ಶಾಸಕರು ತಮಗೆ ಬೇಕಾದವರನ್ನು ಬೇರೆ ಇಲಾಖೆಗೆ ಕಳುಹಿಸಿಕೊಡಿ ಎಂದು ಒತ್ತಡ ಹಾಕುತ್ತಾರೆ. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಲು ಇಂಜಿನಿಯರ್ ಗಳು ಮುಂದೆ ಬರುತ್ತಿಲ್ಲ. ಈ ದೃಷ್ಟಿಯಿಂದ ನನ್ನ ಗಮನಕ್ಕೆ ತರದೆ ಯಾರನ್ನೂ ವರ್ಗಾವಣೆ ಮಾಡಬೇಡಿ ಎಂದು ಹೇಳಿದ್ದೇನೆ ಅಂತ ಡಿಸಿಎಂ ಡಿಕೆ ಶಿವಕಯಮಾರ್ ಹೇಳಿದ್ದಾರೆ.
ಎಲ್ಲಾ ಇಲಾಖೆಗಳಲ್ಲೂ ವರ್ಗಾವಣೆ ಅನ್ನೋದು ಸರ್ವೇ ಸಾಮಾನ್ಯ. ಆದರೆ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ವರ್ಗಾವಣೆಗೆ ಡಿಕೆ ಶಿವಕುಮಾರ್ ಅವರ ವಿರೋಧವಿದ್ದು, ಸಿಎಂ ಯಾವ ನಿರ್ಧಾರ ಮಾಡ್ತಾರೆ ಅನ್ನೋದನ್ನ ನೋಡಬೇಕಿದೆ.











