ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಶುಕ್ರವಾರ ನಡೆಯುತ್ತಿದ್ದ ಗೃಹ ಪ್ರವೇಶ ಕಾರ್ಯಕ್ರಮವೊಂದರಲ್ಲಿ ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ ಘಟನೆಯೊಂದು ಜರುಗಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರ ಪರಮಾಪ್ತ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾವಸಾಬ ಬೇವನೂರ ಅವರು ಸವದಿಯವರ ಕಣ್ಣೆದುರಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತಾಂವಶಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಕ್ಷ್ಮಣ ಸವದಿ ಅವರೊಂದಿಗೆ ರಾವಸಾಬ ಬೇವನೂರ ಅವರು ಕೂಡ ಆಗಮಿಸಿದ್ದರು. ಕಾರ್ಯಕ್ರಮದ ಸಂಭ್ರಮದ ವಾತಾವರಣದ ನಡುವೆಯೇ ರಾವಸಾಬ ಬೇವನೂರ ಅವರಿಗೆ ಏಕಾಏಕಿ ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಲಕ್ಷ್ಮಣ ಸವದಿ ಅವರ ಎದುರಲ್ಲೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಲಕ್ಷ್ಮಣ ಸವದಿ ಹಾಗೂ ನೆರೆದಿದ್ದವರು ಅವರಿಗೆ ನೆರವು ಒದಗಿಸಿ, ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟರಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮೃತ ರಾವಸಾಬ ಬೇವನೂರ ಅವರು ಕೇವಲ ರಾಜಕೀಯ ನಾಯಕರಾಗಿರದೆ, ಅಥಣಿ ತಾಲೂಕಿನಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದರು.ಅವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜನರ ಪರವಾಗಿ ಕೆಲಸ ಮಾಡಿದ್ದರು.ಪ್ರಸ್ತುತ ಹಾಲುಮತ ಸಮಾಜದ ತಾಲೂಕು ಅಧ್ಯಕ್ಷರಾಗಿ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು. ಅವರ ಈ ಅಕಾಲಿಕ ಮರಣವು ಹಾಲುಮತ ಸಮಾಜ ಸೇರಿದಂತೆ ತಾಲೂಕಿನಾದ್ಯಂತ ಅಪಾರ ಬೆಂಬಲಿಗರಿಗೆ ಬರಸಿಡಿಲು ಬಡಿದಂತಾಗಿದೆ.
ಲಕ್ಷ್ಮಣ ಸವದಿ ಹಾಗೂ ರಾವಸಾಬ ಬೇವನೂರ ಅವರು ಬಹುಕಾಲದ, ದಶಕಗಳ ಹಳೆಯ ಆಪ್ತಮಿತ್ರರು. ರಾಜಕೀಯ ಹಾಗೂ ವೈಯಕ್ತಿಕವಾಗಿ ಸವದಿಯವರ ಪ್ರತಿಯೊಂದು ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತಿದ್ದ ಬೇವನೂರ ಅವರ ಅಗಲಿಕೆ, ಲಕ್ಷ್ಮಣ ಸವದಿ ಅವರನ್ನು ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ,ಸಂತೋಷದಿಂದ ನಡೆಯುತ್ತಿದ್ದ ಗೃಹ ಪ್ರವೇಶದ ಮನೆಯಲ್ಲಿ ಕ್ಷಣಾರ್ಧದಲ್ಲಿಯೇ ಈ ದುರ್ಘಟನೆ ಸಂಭವಿಸಿದ್ದು, ಇಡೀ ತಾಂವಶಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.















