ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸೋಮವಾರ 2025-26ನೇ ಸಾಲಿನ ‘ಕಿಡ್ಡೀ ಫೀಟ್’ ಪದವಿ ಪ್ರದಾನ ಸಮಾರಂಭ ಅತ್ಯಂತ ಸಂಭ್ರಮದಿಂದ ಜರುಗಿತು.
ಶೈಕ್ಷಣಿಕ ಹಂತದ ಮೊದಲ ಮೈಲಿಗಲ್ಲನ್ನು ತಲುಪಿದ ಪುಟಾಣಿ ಮಕ್ಕಳ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಸಂಭ್ರಮದ ವಾತಾವರಣದ ಈ ಸಮಾರಂಭದಲ್ಲಿ ಪದವಿ ಗೌರವ ಸ್ವೀಕರಿಸಿದ ಯುಕೆಜಿ ಪುಟಾಣಿಗಳು ಶೈಕ್ಷಣಿಕ ಉಡುಪಿನಲ್ಲಿ ಮಿಂಚಿದರು. ಪೋಷಕರು ತಮ್ಮ ಮಕ್ಕಳ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಖ್ಯಾತ ಮಕ್ಕಳ ತಜ್ಞರಾದ ಡಾ. ಪೃಥ್ವೀಶ್ ಅವರು ಆಗಮಿಸಿ, ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಡಾ. ಪೃಥ್ವೀಶ್, ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಮೊಬೈಲ್ ಹಾಗೂ ಪೌಷ್ಟಿಕಾಂಶದ ಕೊರತೆ ಗಂಭೀರ ಪರಿಣಾಮ ಬೀರುತ್ತಿದ್ದು, ಪೋಷಕರು ಈ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಪೌಷ್ಟಿಕಾಂಶದ ಮಹತ್ವದ ಕುರಿತು ವಿವರಿಸಿದ ಅವರು, ಮಕ್ಕಳಿಗೆ ಪ್ರಕೃತಿದತ್ತವಾಗಿ ಸಿಗುವ ನೈಸರ್ಗಿಕ ಆಹಾರ ಪದಾರ್ಥಗಳನ್ನು ನೀಡಬೇಕು ಮತ್ತು ಹೊರಗಿನ ಪ್ಯಾಕೆಟ್ ಆಹಾರಗಳಲ್ಲಿ ಇರುವ ಅತಿಯಾದ ಸಕ್ಕರೆ ಹಾಗೂ ಸೋಡಿಯಂ (ಉಪ್ಪು) ಅಂಶಗಳಿಂದ ಮಕ್ಕಳನ್ನು ದೂರವಿಡಬೇಕು. ಹಿಂದೆ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಇಂದು ತಪ್ಪು ಆಹಾರ ಪದ್ಧತಿಯಿಂದಾಗಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
3 ರಿಂದ 4 ವರ್ಷದವರೆಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಅಥವಾ ಟಿವಿ ತೋರಿಸಬಾರದು ಎಂದು ತಿಳಿಸಿದ ಅವರು, ಕೇವಲ ವಿಡಿಯೋ ಕಾಲ್ ಮಾಡುವುದಕ್ಕೆ ಮಾತ್ರ ವಿನಾಯಿತಿ ನೀಡಬಹುದು. 5 ರಿಂದ 6 ವರ್ಷದ ನಂತರದ ಮಕ್ಕಳಿಗೆ ದಿನಕ್ಕೆ ಕೇವಲ ಒಂದರಿಂದ ಎರಡು ಗಂಟೆ ಮಾತ್ರ ಸ್ಕ್ರೀನ್ ಸಮಯ ನಿಗದಿಪಡಿಸುವುದು ಸೂಕ್ತ. ಮೊಬೈಲ್ ನೋಡುವಾಗ ಮೆದುಳಿನಲ್ಲಿ ‘ಡೋಪಮೈನ್’ ಎಂಬ ರಾಸಾಯನಿಕ ಬಿಡುಗಡೆಯಾಗಿ ಮಕ್ಕಳಿಗೆ ಅತಿಯಾದ ಸಂತೋಷ ನೀಡುವುದರಿಂದ, ಅವರು ಈ ಚಟಕ್ಕೆ ಬೇಗನೆ ದಾಸರಾಗುತ್ತಾರೆ ಮತ್ತು ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಪೋಷಕರು ಮೊದಲು ತಮ್ಮ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳಿಗೆ ಮಾದರಿಯಾಗಬೇಕು ಮತ್ತು ಕಾಯಿಲೆ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಮುಂಜಾಗ್ರತಾ ಕ್ರಮಗಳೇ ಇಂದಿನ ಅಗತ್ಯವಾಗಿದೆ ಎಂದು ಡಾ. ಪೃಥ್ವೀಶ್ ಅಭಿಪ್ರಾಯಪಟ್ಟರು.
ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಆಕ್ರಮಣಕಾರಿ ಸ್ವಭಾವ, ಖಿನ್ನತೆ ಮತ್ತು ಭಾಷಾ ಬೆಳವಣಿಗೆಯ ವಿಳಂಬದಂತಹ ಗಂಭೀರ ಸಮಸ್ಯೆಗಳು ಕಂಡುಬರುತ್ತಿವೆ. ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸದೆ ಅವರಿಗೆ ‘ಇಲ್ಲ’ ಎನ್ನುವುದನ್ನು ಪೋಷಕರು ರೂಢಿಸಿಕೊಳ್ಳಬೇಕು ಮತ್ತು ಅವರ ಸೃಜನಶೀಲತೆ ಹೆಚ್ಚಿಸಲು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಅತಿಯಾದ ರಕ್ಷಣೆ ನೀಡುವ ಬದಲು ಮಕ್ಕಳು ಸ್ವತಂತ್ರವಾಗಿ ಬೆಳೆಯಲು ಬಿಡಬೇಕು ಹಾಗೂ ತಂದೆಯಂದಿರೂ ಸಹ ಮಕ್ಕಳ ಪಾಲನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅವಶ್ಯಕ ಎಂದು ಕಿವಿಮಾತು ಹೇಳಿದರು.
ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪದವಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಗಳು ಕೇವಲ ದೊಡ್ಡವರಿಗೆ ಸೀಮಿತವಾಗದೆ, ಸಣ್ಣ ಮಕ್ಕಳಿಗೂ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಹಾವಳಿಯಿಂದಾಗಿ ಮಕ್ಕಳು ತಮ್ಮ ನೈಜ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶೇಷವಾಗಿ ಮಕ್ಕಳು ಊಟ ಮಾಡುವಾಗ ಮೊಬೈಲ್ ಅಥವಾ ಟಿವಿ ನೋಡುವುದನ್ನು ರೂಢಿಸಿಕೊಳ್ಳುತ್ತಿದ್ದು, ಇದರಿಂದ ತಾವು ಏನು ತಿನ್ನುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ಆಹಾರ ಸೇವಿಸುತ್ತಿದ್ದಾರೆ. ಪೋಷಕರು ಮೊದಲು ತಮ್ಮ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದರೆ ಮಾತ್ರ ಮಕ್ಕಳನ್ನು ಈ ವ್ಯಸನದಿಂದ ದೂರವಿಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ, ಅವರು ಮಕ್ಕಳ ರಕ್ಷಕರು ಮತ್ತು ಮಾರ್ಗದರ್ಶಕರು. ಒಬ್ಬ ಪೋಷಕರಾಗಿ ಮನೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಕಷ್ಟವಿರುವಾಗ, ಶಿಕ್ಷಕರು ಶಾಲೆಯಲ್ಲಿ 40 ಮಕ್ಕಳನ್ನು ಪ್ರೀತಿಯಿಂದ ನಿಯಂತ್ರಿಸುತ್ತಾರೆ. ಆದ್ದರಿಂದ ಪೋಷಕರು ಶಿಕ್ಷಕರ ಶ್ರಮವನ್ನು ಗುರುತಿಸಬೇಕು ಮತ್ತು ಸಣ್ಣಪುಟ್ಟ ವಿಷಯಗಳಿಗೆ ದೂರು ನೀಡುವ ಮೊದಲು ಶಿಕ್ಷಕರ ಸ್ಥಾನದಲ್ಲಿ ನಿಂತು ಯೋಚಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಸುನೀತಾ ವಿಜಯ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್