ಬೆಂಗಳೂರು: ಕಳೆದ ಕೆಲವು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ರಾಜಾತಿಥ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಾ ಇದೆ. ಇದು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರದಲ್ಲೂ ಚರ್ಚೆ ಭುಗಿಲೆದ್ದಿದೆ. ರಾಜ್ಯದ ಜನತೆಯ ಕೆಂಗಣ್ಣಿಗೆ ಅಲ್ಲಿನ ಅಧಿಕಾರಿಗಳು ಗುರಿಯಾಗಿದ್ದಾರೆ. ಅಂಥ ಕಾಮುಕ ಉಮೇಶ್ ರೆಡ್ಡಿಗೆ ರಾಜಾತಿಥ್ಯ ನೀಡುತ್ತಿದ್ದಾರೆ. ಉಗ್ರವಾದಿಗೆ ಫೋನ್ ಕೊಡ್ತಾ ಇದ್ದಾರೆ ಎಂಬೆಲ್ಲಾ ಚರ್ಚೆ ನಡೆಯುತ್ತಿರುವಾಗಲೇ ದರ್ಶನ್ ಗೆ ಮಾತ್ರ ಯಾಕೆ ಕೊಡ್ತಾ ಇಲ್ಲ ಎಂಬೆಲ್ಲಾ ಚರ್ಚೆಗಳಿಗೂ ದಾರಿ ಮಾಡಿಕೊಟ್ಟಿದ್ದಾರೆ. ಇದೀಗ ಸಿಸಿಬಿ ಕಣ್ಣು ಧನ್ವೀರ್ ಮೇಲೆ ಬಿದ್ದಿದೆ.
ದರ್ಶನ್ ಆಪ್ತ ಧನ್ವೀರ್ ಈ ವಿಡಿಯೋಗಳನ್ನೆಲ್ಲಾ ಲೀಕ್ ಮಾಡಿದ್ದಾರೆ ಎಂಬ ಅನುಮಾನ ಸಿಸಿಬಿ ಪೊಲೀಸರಿಗೆ ಮೂಡಿದೆ. ಇದೇ ಕಾರಣಕ್ಕೆ ಈಗಾಗಲೇ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಧನ್ವೀರ್ ಅವರನ್ನ ವಿಚಾರಣೆಗೂ ಕರೆದಿದ್ದಾರೆ. ಅಷ್ಟಕ್ಕೂ ಧನ್ವೀರ್ ಅವರಿಗೆ ಈ ವಿಡಿಯೋಗಳು ಹೇಗೆ ಸಿಕ್ತು..? ಎಂಬೆಲ್ಲಾ ಅನುಮಾನಗಳು ಹುಟ್ಟಿಕೊಂಡಿವೆ. ಒಂದು ವೇಳೆ ಮೊಬೈಲ್ ಪರೀಕ್ಷೆ ವೇಳೆ ಧನ್ವೀರ್ ಅವರೇ ಈ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂಬುದು ಗೊತ್ತಾದರೆ ಈ ಹ್ಯಾಂಗಲ್ ನಿಂದ ತನಿಖೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೊತೆಗೆ ಆರಂಭದಿಂದಾನೂ ನಿಂತಿರೋದು ಧನ್ವೀರ್ ಅವರೇ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಹಾಸಿಗೆ, ದಿಂಬು ಕೂಡ ಸಿಕ್ತಾ ಇಲ್ಲ ಎಂಬ ಅರ್ಜಿ ಕೋರ್ಟ್ ಗೆ ಹಾಕಿದ್ದಾರೆ. ಆದರೂ ಹಾಸಿಗೆ, ದಿಂಬು ಸಿಕ್ತಾ ಇಲ್ಲ. ಹೀಗಿರುವಾಗ ಪರಪ್ಪನ ಅಗ್ರಹಾರದ ರಾಜಾತಿಥ್ಯ ವಿಡಿಯೋಗಳು ವೈರಲ್ ಆಗ್ತಿವೆ. ಇದರಿಂದ ಸಿಸಿಬಿ ಪೊಲೀಸರು ಅನುಮಾನ ಪಟ್ಟರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.




