ಬೆಂಗಳೂರು: ಕಳೆದ 9 ದಿನಗಳಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ನಿನ್ನೆ ಸಂಜೆ ಜಯ ಸಿಕ್ಕಿದೆ. ಒಂದು ಟನ್ ಕಬ್ಬಿಗೆ 3500 ರೂಪಾಯಿಗೆ ಬೇಡಿಕೆ ಇಟ್ಟಿದ್ದ ರೈತರಿಗೆ ಸರ್ಕಾರದಿಂದ 3300 ರೂಪಾಯಿ ಫೈನಲ್ ಆಗಿದೆ. ಸಿದ್ದರಾಮಯ್ಯ ತಿಳಿಸಿದ ಈ ನಿರ್ಧಾರಕ್ಕೆ ಬೆಳಗಾವಿ ರೈತರು ಖುಷಿ ಪಟ್ಟಿದ್ದು, ಹೋರಾಟವನ್ನು ಕೈ ಬಿಟ್ಟಿದ್ದಾರೆ. ಆದರೆ ಇದೇ ನಿರ್ಧಾರ ಅದ್ಯಾಕೋ ಏನೋ ವಿಜಯಪುರ, ಬಾಗಲಕೋಟೆ ರೈತರಿಗೆ ಕಳವಳ ಹುಟ್ಟಿಸಿದೆ.
ಕಬ್ಬು ಬೆಳೆಗೆ ಬೆಂಬಲ ಬೆಲೆ ಕೊಡುವಂತೆ ರೈತರು ಹಲವು ಕಡೆ ಹೋರಾಟ ಮಾಡ್ತಾ ಇದ್ರು. ಒಂದು ಟನ್ ಗೆ 3200 ರೂಪಾಯಿ ಈ ಮೊದಲು ಕೊಡ್ತಾ ಇದ್ದಂತ ಬೆಲೆ ಆಗಿದೆ. ಈಗ 100 ರೂಪಾಯಿ ಏರಿಕೆ ಮಾಡಲಾಗಿದೆ. ಈ 100 ರೂಪಾಯಿ ಹೆಚ್ಚಳವನ್ನು ಒಪ್ಪಿಕೊಂಡಿದ್ದಕ್ಕೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ರೈತರು ಹೋರಾಟವನ್ನು ಕೈ ಬಿಡುವುದಾಗಿ ಹೇಳಿದ್ರೆ ವಿಜಯಪುರ, ಬಾಗಲಕೋಟೆ ರೈತರು ಮುಷ್ಕರವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ನಮ್ಮ ಬೇಡಿಕೆ ಇದ್ದದ್ದು ಕನಿಷ್ಠ 3500 ರೂಪಾಯಿ ಬೇಕು ಎಂದು. ಆದರೆ ಈಗ ಘೋಷಣೆ ಮಾಡಿರುವ ಹಣ ಸಾಕಾಗೋದಿಲ್ಲ. ಅದೇನೆ ಆದೇಶ ಇರಲಿ ನಾವೂ ಹೋರಾಟ ಮುಂದುವರೆಸುತ್ತೇವೆ ಎಂದು ರೈತ ಮುಖಂಡ ವೀರಣ್ಣ ಹಂಚಿನಾಳ ತಿಳಿಸಿದ್ದಾರೆ. ಬೇಡಿಕೆ ಇಟ್ಟಿದ್ದಕ್ಕಿಂತ ಕಡಿಮೆ ಮೊತ್ತವನ್ನ ಸರ್ಕಾರ ಘೋಷಣೆ ಮಾಡಿದೆ. ಹಲವು ರೈತರು ಅದಕ್ಕೆ ತೃಪ್ತಿಯಾದರೆ ಇನ್ನು ಕೆಲ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆ ರೈತರಿಂದ ಇನ್ನು ಎಷ್ಟು ದಿನ ಪ್ರತಿಭಟನೆ ನಡೆಯುತ್ತೆ ನೋಡಬೇಕಿದೆ.





