ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಎರಡನೇ ಬಾರಿಗೆ ಜೈಲು ಪಾಲಾಗಿದ್ದಾರೆ. ಆದರೆ ಈ ಕೇಸಲ್ಲಿ ಇದೀಗ ಮಹತ್ವದ ಬೆಳವಣಿಗೆ ನಡೆದಿದ್ದು, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಕೋರ್ಟ್ ಗೆ ಮೊಮೊ ಸಲ್ಲಿಕೆ ಮಾಡಿದ್ದಾರೆ. ಆದಷ್ಟು ಬೇಗ ವಿಚಾರಣೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದರು ಕೂಡ ಆರೋಪಿಗಳು ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡ್ತಾ ಇದ್ದಾರೆ ಎಂದು ದೂರಿದ್ದಾರೆ.
ಕೋರ್ಟ್ ಗೆ ಪದೇ ಪದೇ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದು, ಈ ಮೂಲಕ ವಿಚಾರಣೆಯನ್ನು ವಿಳಂಬ ಮಾಡ್ತಾ ಇದ್ದಾರೆ ಎಂದು ದೂರಿದ್ದಾರೆ. ಅರ್ಜಿಗಳನ್ನು ಸಲ್ಲಿಕೆ ಮಾಡುವಂತಿದ್ದರೆ ಎಲ್ಲರು ಒಟ್ಟಿಗೆ ಮಾಡಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೆ ಈಗ ಒಬ್ಬರ ನಂತರ ಒಬ್ಬರು ಕೇಸ್ ನಿಂದ ಮುಕ್ತಿಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.
ಆರೋಪಿಗಳ ಪರ ವಕೀಲರು ಉದ್ದೇಶಪೂರ್ವಕವಾಗಿಯೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕೋರ್ಟ್ ಸಮಯವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಆದಷ್ಟು ಬೇಗ ವಿಚಾರಣೆ ನಡೆದು, ಕೋರ್ಟ್ ತೀರ್ಪು ನೀಡಬೇಕೆಂದು ಎಸ್ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ. ಸದ್ಯ ದರ್ಶನ್ ಅವರಿಗೆ ಇರುವುದು ಜಾಮೀನಿನ ಚಿಂತೆಗಿಂತ ಹಾಸಿಗೆ, ದಿಂಬಿನ ಚಿಂತೆ. ಮನೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದ ನಟ ದರ್ಶನ್ ಜೈಲಿನಲ್ಲಿ ನರಕಯಾತನೆ ಪಡುವಂತಾಗಿದೆ. ಅದರಲ್ಲೂ ಬೆನ್ನು ನೋವು, ಮೊಣ ಕೈ ನೋವಿನಿಂದ ಬಳಲುತ್ತಿದ್ದಾರೆ.





