ಯಾದಗಿರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಹತ್ತರ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಶನಿವಾರ ಬೆಳಗಿನ ಜಾವದ ವರೆಗೆ ಸುರಿಯಿತು. ಬಳಿಕ ಕೆಲಕಾಲ ಬಿರುಸಾಗಿ ಸುರಿದ ಮಳೆ ಮತ್ತೆ ಜಿಟಿಜಿಟಿಯಾಗಿ ಬಿದ್ದು, ಜನಜೀವನ ಅಸ್ತವ್ಯಸ್ತಗೊಳಿಸಿತು. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ವ್ಯಾಪಾರ ವಹಿವಾಟಿಗೂ ಹಿನ್ನಡೆಯಾಯಿತು. ಕೆಲವು ಅಂಗಡಿಗಳ ಬಾಗಿಲು ಸಹ ತೆರೆಯಲಿಲ್ಲ.
ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಶನಿವಾರ ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಯಿತು. ಕೆಲವರು ಮಳೆಯಲ್ಲೇ ನೆನೆದುಕೊಂಡು ಹೋದರು. ಕೆರೆ ಕಟ್ಟೆಗಳು, ಜಲಾಶಯಗಳು, ಝರಿಗಳು ಮೈದುಂಬಿ ಹರಿದವು. ಅರಣ್ಯದ ಬಂಡೆ ಗಲ್ಲುಗಳ ನಡುವಿನ ಸಣ್ಣ–ಪುಟ್ಟ ಝರಿಗಳು ನೋಡುಗರಿಗೆ ನಯನ ಮನೋಹರವಾಗಿ, ಹಿತ ಭಾವ ತಂದವು.
ಯಾದಗಿರಿ ತಾಲ್ಲೂಕಿನ ಸೌದಾಗರ್ ತಾಂಡಾದ ಮನೆ, ದನದ ಕೊಟ್ಟಿಗೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿನ ದವಸ ಧಾನ್ಯಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ನಿವಾಸಿಗಳು ನಿದ್ರೆ ಇಲ್ಲದೆ ಇಡೀ ರಾತ್ರಿ ಎಚ್ಚರವಾಗಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ 50 ಮಿ.ಮೀ. ಮಳೆ ಸುರಪುರದ ಯಕ್ತಾಪುರದಲ್ಲಿ ಬಿದ್ದಿದೆ. ವಾಡಿಕೆಗಿಂತ ಶೇ 238ರಷ್ಟು ಅತ್ಯಧಿಕ ಮಳೆಯಾಗಿದೆ.
ಭೀಮಾ ನದಿಗೆ ಉಜಿನಿ ಜಲಾಶಯದಿಂದ ಸಾಕಷ್ಟು ನೀರು ಹರಿ ಬಿಡಲಾಗುತ್ತಿದೆ. ಸನ್ನತಿ ಬ್ಯಾರೇಜ್ ನಿಂದ 3.60 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ. ನಗರ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ನ ಎಲ್ಲ ಗೇಟ್ ಗಳು ಎತ್ತಲಾಗಿದ್ದು, ನದಿ ನೀರು ಹಾಲ್ನೊರೆಯೊಂದಿಗೆ ರಭಸವಾಗಿ ಹರಿಯುತ್ತಿದೆ. ಎರಡೂ ದಡಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಎರಡೂ ಕಡೆಯ ಜಮೀನುಗಳಿಗೆ ಪ್ರವಾಹದ ನೀರು ಅಲ್ಲಲ್ಲಿ ನುಗ್ಗಿದೆ.
ಉಜನಿ ಡ್ಯಾಮ್ ನಿಂದ ಇನ್ನೂ ಹೆಚ್ಚಿನ ಪ್ರಮಾಣ ನೀರು ಭೀಮಾ ನದಿಗೆ ಹರಿದು ಬರುವ ಸಾಧ್ಯತೆ ಇದೆ. ಸನ್ನತಿ ಬ್ಯಾರೇಜ್ನಿಂದ ಸುಮಾರು 4 ಲಕ್ಷ ಕ್ಯೂಸೆಕ್ ನೀರು ಹರಿಸಬಹುದು ಎಂದು ಯಾದಗಿರಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕೋಲಾರ ತಿಳಿಸಿದ್ದಾರೆ.
ನದಿಗೆ ಇಳಿಯದಂತೆ, ಜಾನುವಾರುಗಳನ್ನು ಬಿಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಯಾದಗಿರಿ ನಗರ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಸಾರ್ವಜನಿರು ಓಡಾದಂತೆ, ನದಿ ಸಮೀಪ ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಸತತ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾದಗಿರಿ ಜಿಲ್ಲೆಯ ಸಿಬಿಎಸ್ಇ, ಎನ್ಸಿಇಆರ್ಟಿ ಮತ್ತು ಐಸಿಎಸ್ಸಿ ಪಠ್ಯಕ್ರಮ ಅನುಸುತ್ತಿರುವ ಶಾಲೆಗಳಿಗೆ ಸೆಪ್ಟೆಂಬರ್ 27ರಂದು ರಜೆ ಘೋಷಿಸಲಾಗಿದೆ ಎಂದು ಯಾದಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ತಿಳಿಸಿದ್ದಾರೆ.

















