ಗಣತಿ ಸಮೀಕ್ಷೆಯಲ್ಲಿ ವಿಶ್ವಕರ್ಮ ಎಂದು ಬರೆಸಿ : ಪ್ರಸನ್ನಕುಮಾರ್ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ವಿಶ್ವಕರ್ಮ ಎಂದು ಬರೆಸುವಂತೆ ಅಖಿಲ ಭಾರತ ವಿಶ್ವಕರ್ಮ ಪರಿಷತ್‍ನ ನಿಕಟ ಪೂರ್ವ ಅಧ್ಯಕ್ಷ ಪ್ರಸನ್ನಕುಮಾರ್ ಮನವಿ ಮಾಡಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜವನ್ನು 41 ಉಪ ಜಾತಿಗಳಿಂದ ಕರೆಯಲಾಗುತ್ತದೆ. ಕಮ್ಮಾರಿಕೆ, ಬಡಗಿ, ಚಿನ್ನ-ಬೆಳ್ಳಿ, ಶಿಲ್ಪಕಲೆ, ಕಂಚಿನ ಕೆಲಸ ಮಾಡಿಕೊಂಡು ವಿಶ್ವಕರ್ಮರು ಜೀವನ ಸಾಗಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಈಗಲೂ ಹಳ್ಳಿಗಾಡಿನಲ್ಲಿ ಕಮ್ಮಾರಿಕೆ ಕೆಲಸ ಮಾಡುವವರಿದ್ದಾರೆ. ಹಿಂದಿನ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆ 15 ಲಕ್ಷ ತೋರಿಸಲಾಗಿದೆ. ಕ್ರಿಶ್ಚಿಯನ್ ವಿಶ್ವಕರ್ಮ ಎನ್ನುವ ಪದ ಗೊಂದಲ ಮೂಡಿಸಿದೆ. ಹಾಗಾಗಿ ಗಣತಿಯಲ್ಲಿ ನಿಖರವಾಗಿ ವಿಶ್ವಕರ್ಮ ಎಂದೆ ಬರೆಸುವಂತೆ ಪ್ರಸನ್ನಕುಮಾರ್ ವಿನಂತಿಸಿದರು.

ವಡ್ಡನಾಳ್‍ನ ಶಂಕರಾತ್ಮಾನಂದ ಸ್ವಾಮೀಜಿ ಮಾತನಾಡಿ ಸೆ.22 ರಿಂದ ಅ.7 ರವರೆಗೆ ನಡೆಯುವ ಗಣತಿಯಲ್ಲಿ ವಿಶ್ವಕರ್ಮ ಎಂದು ಬರೆಸಬೇಕು. ಕುಲಕಸುಬು ವಿಚಾರ ಬಂದಾಗ ಅವರವರ ವೃತ್ತಿಯನ್ನು ಬರೆಸಿಕೊಳ್ಳಿ. ಯಾವುದೇ ಕಾರಣಕ್ಕು ಉಪ ಜಾತಿ, ಉಪ ಪಂಗಡಗಳನ್ನು ಬರೆಸುವುದು ಬೇಡ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವುದಕ್ಕಾಗಿ ಗಣತಿದಾರರು ಮನೆ ಮನೆಗೆ ಬಂದಾಗ ಸಂಪೂರ್ಣ ಮಾಹಿತಿ ಕೊಡಿ. ಸರಿಯಾದ ಸಂಖ್ಯೆ ತಿಳಿಯಬೇಕಾಗಿರುವುದರಿಂದ ಯಾರು ಸಮೀಕ್ಷೆಯಿಂದ ವಂಚಿತರಾಗಬೇಡಿ. ಹಿಂದೂ ಧರ್ಮಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆಯಿದೆ. ವಿಶ್ವಕರ್ಮ ಕ್ರಿಶ್ಚಿಯನ್ ಎನ್ನುವ ಪದ ತೆಗೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

 

ನೈಜ ಗಣತಿ ಹೊರಬಿದ್ದಾಗ ಮಾತ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಶಂಕರಾತ್ಮಾನಂದ ಸ್ವಾಮೀಜಿ ಹೇಳಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಶಂಕರಾಚಾರ್ಯ, ಕಾರ್ಯಾಧ್ಯಕ್ಷ ಎಂ.ಶಂಕರಮೂರ್ತಿ, ವಿಶ್ವಕರ್ಮ ನಿಗಮದ ಸದಸ್ಯ ಡಿ.ವೆಂಕಟೇಶ್, ಮಾಜಿ ಸದಸ್ಯರುಗಳಾದ ಸಿ.ನಾರಾಯಣಚಾರ್, ಎಸ್.ನಾಗೇಂದ್ರಚಾರ್, ಚಳ್ಳಕೆರೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್.ಚಂದ್ರಶೇಖರಾಚಾರ್, ಮೊಳಕಾಲ್ಮುರುವಿನ ಉಮೇಶ್, ಲೋಕೇಶ್ ನಾಯಕನಹಟ್ಟಿ, ಶ್ರೀಧರಾಚಾರ್, ಸಂಜಯ್, ಭಾನು ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Enable Notifications OK No thanks