ಬೆಂಗಳೂರು: ಹಾಸನದಲ್ಲಿ ನಡೆದ ಅಪಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಾರ ಕನಸು ಕಂಡಿದ್ದ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಓದು ಮುಗಿಸಿ ಮಗ ಇಂಜಿನಿಯರ್ ಆಗ್ತಾನೆ ಎಂಬ ದೊಡ್ಡ ಕನಸು ಕಂಡಿದ್ದರು. ವಿಧಿ ಹೀಗೆ ಅರ್ಧದಲ್ಲಿಯೇ ಕರೆದುಕೊಂಡು ಹೋದರೆ ಆ ತಂದೆ ತಾಯಿಯ ನೋವು ಸಹಿಸೋದು ಹೇಗೆ. ಇದೀಗ ಕೇಂದ್ರ ಸರ್ಕಾರದಿಂದ ಮೋದಿ ಅವರು ಎರಡು ಲಕ್ಷ ಪರಿಹಾರ ಘೋಷಿಸಿದ್ದು, ರಾಜ್ಯದಿಂದ ಹತ್ತು ಲಕ್ಷ ಪರಿಹಾರ ನೀಡುವಂತೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಹೇಳಿದ್ದು ಹೀಗೆ.
ಅಪಘಾತಗಳು ಆಗಬಾರದು ಎಂಬ ಕಾರಣಕ್ಕೇನೆ ರೋಡ್ ರೂಲ್ಸ್ ಮಾಡಿದ್ದೀವಿ. ಆದ್ರೆ ಡ್ರೈವರ್ ಗಳ ತಪ್ಪಿನಿಂದ ಆಕ್ಸಿಡೆಂಟ್ ಆದ್ರೆ ಸರ್ಕಾರ ಹೇಗೆ ಹೊಣೆ ಆಗುತ್ತೆ. ನಿನ್ನೆ ಲಾರಿ ನುಗ್ಗಿ ಅಪಘಾತವಾಗಿದೆ. ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡರಿಗೆ ಹೇಳಿದ್ದೀನಿ. ಬೆಳಗ್ಗೆನೆ ಅಲ್ಲಿ ಹೋಗಿ ಪರಿಶೀಲನೆ ಮಾಡಿ, ಪರಿಹಾರ ನೀಡಿ ಅಂತ ಹೇಳಿದ್ದೇನೆ. ಪರಿಹಾರವನ್ನು ನೀಡಿದ್ದಾರೆ. ಆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಆ ನೋವನ್ನ ಭರಿಸುವ ಶಕ್ತಿ ನೀಡಲಿ ಭಗವಂತ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಗರು ಹತ್ತು ಲಕ್ಷಕ್ಕೆ ಒತ್ತಾಯಿಸ್ತಾ ಇದ್ದಾರೆ ಸರ್ ಎಂದಾಗ, ಅವರು ಎಷ್ಟು ಕೊಟ್ಟಿದ್ದಾರೆ. ಅವರು ಹೆಚ್ಚೇನು ಘೋಷಿಸಿಲ್ಲ. ಪರಿಹಾರ ಅಂತ ಕೊಡ್ತಾ ಇರೋದು ಸತ್ತೋರನ್ನ ವಾಪಸ್ ತರ್ತೀವಿ ಅಂತ ಅಲ್ಲ. ಸರ್ಕಾರ ಇಂಥಹ ಸಂದರ್ಭದಲ್ಲಿ ಅವರ ಜೊತೆಗೆ ಸದಾ ನಿಲ್ಲಲಿದೆ. ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವುದಕ್ಕೆ ಈ ರೀತಿ ಮಾಡ್ತೀವಿ. ಸಾವಿಗೆ ಸಮಾನ ಅಂತಲ್ಲ ಅದು ಎಂದಿದ್ದಾರೆ.




