ಸುದ್ದಿಒನ್, ಬೆಂಗಳೂರು, ಸೆಪ್ಟೆಂಬರ್. 04 : ಕೇಂದ್ರ ಸರ್ಕಾರವು ಸರಕು ಮತ್ತು ಸೇವೆಗಳ ಮೇಲೆ ಜಿಎಸ್ಟಿ ಇಳಿಕೆ ಮಾಡಿರುವ ಕ್ರಮವನ್ನು ಸ್ವಾಗತಿಸಿರುವ ಶಾಂತಿನಗರ ಶಾಸಕರಾದ ಎನ್.ಎ. ಹ್ಯಾರಿಸ್ ಅವರು ಇದು ತುಂಬಾ ತಡವಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಇದೊಂದು ರೀತಿ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ಎಂದು ವಿಮರ್ಶೆ ಮಾಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹ್ಯಾರಿಸ್ ಅವರು, “ಕಳೆದ 8 ವರ್ಷಗಳಲ್ಲಿ ಶ್ರೀಸಾಮಾನ್ಯರು ದುಬಾರಿ ತೆರಿಗೆಯಿಂದ ಸಂಕಷ್ಟಕ್ಕೆ ಒಳಗಾದರು, MSME ಕ್ಷೇತ್ರ, ಸಣ್ಣ ಪುಟ್ಟ ವ್ಯಾಪಾರಿಗಳು ಭಾರೀ ನಷ್ಟದ ಪರಿಣಾಮವಾಗಿ ತಮ್ಮ ವ್ಯಾಪಾರವನ್ನೇ ನಿಲ್ಲಿಸಿದರು. ಕೇಂದ್ರ ಸರ್ಕಾರಕ್ಕೆ ಆಗಲೇ ತನ್ನ ತಪ್ಪಿನ ಅರಿವಾಗಬೇಕಿತ್ತು. ಹಾಗಾಗಿ ಕೇಂದ್ರ ಸರ್ಕಾರದ ಈ ನಡೆ ಖಂಡಿತವಾಗಿಯೂ ಮಾಸ್ಟರ್ ಸ್ಟ್ರೋಕ್ ಅಲ್ಲ, ಬದಲಾಗಿ ಕೆಟ್ಟ ಮೇಲೆ ಬುದ್ದಿ ಬಂದಿದೆ ಅಷ್ಟೆ”, ಎಂದು ಹೇಳಿದ್ದಾರೆ.
“ಜಿಎಸ್ಟಿ ಚರ್ಚೆ ಆರಂಭವಾದಾಗಿನಿಂದಲೇ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು 18% ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಜಿಎಸ್ಟಿ ವಿಧಿಸುವಂತೆ ಆಗ್ರಹಿಸಿದ್ದರು. ಆದರೂ, ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ. 9 ಬಗೆಯ ತೆರಿಗೆ ಸ್ಲ್ಯಾಬ್ಗಳ ಮೂಲಕ ಜನರ ಬದುಕನ್ನೇ ನರಕವಾಗಿಸಲಾಯಿತು. ಕನಿಷ್ಠ ಈಗಲಾದರೂ ಜಿಎಸ್ಟಿ ಇಳಿಕೆ ಮಾಡಿರುವುದು ಸಮಾಧಾನಕರ ಅಷ್ಟೆ, ಜನಸಾಮಾನ್ಯರ ಬದುಕು ಸುಗಮವಾಗಲು ಹಾಗೂ ಆರ್ಥಿಕ ಪರಿಸ್ಥಿತಿ ಮರಳಿ ಹಳಿಗೆ ಬರಲು ಜಿಎಸ್ಟಿ ಇನ್ನಷ್ಟು ಇಳಿಸುವ ಅವಶ್ಯಕತೆ ಇದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.









