ಬೆಂಗಳೂರು: ಕಿಚ್ಚ ಸುದೀಪ್ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಅಮ್ಮನಿಲ್ಲದ ನೋವು ಕಿಚ್ಚನಿಗೆ ಕಾಡುತ್ತಿದೆ. ಆದರೂ ಅಭಿಮಾನಿಗಳಿಗೋಸ್ಕರ ಇಂದು ರಾತ್ರಿಯಿಡೀ ಅಭಿಮಾನಿಗಳೊಟ್ಟಿಗೆ ಇರುತ್ತಾರೆ. ಈ ಬಗ್ಗೆ ಒಂದು ಮಾಧ್ಯಮ ಸಂವಾದವನ್ನು ನಡೆಸಿದ್ದಾರೆ. ಈ ವೇಳೆ ರಾಜಕೀಯಕ್ಕೆ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಜೊತೆಗೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡಿದರು. ಇದು ಕುತೂಹಲಕಾರಿಯಾಗಿತ್ತು. ಆ ಚರ್ಚೆಯ ಬಗ್ಗೆಯೂ ಮಾತನಾಡಿದ ಸುದೀಪ್ ಅವರು, ಸಿದ್ದರಾಮಯ್ಯ ಅವರು ಪಾಪ ಅವರಿಗೆ ಅವರದ್ದೇ ತಲೆನೋವು ತುಂಬಾನೆ ಇದೆ. ನನ್ನನ್ನ ಯಾಕೆ ಅದಕ್ಕೆಲ್ಲ ಸೇರಿಸಿಕೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ನಾನು ಮೊದಲೇ ಹೇಳಿದ್ದೇನೆ. ನನಗೆ ಅವರ ಮೇಲೆ ಅಪಾರವಾದಂತ ಗೌರವ ಇದೆ. ಕಾರಣ ಏನು ಅಂದ್ರೆ ನಾನು ಬೇರೆ ಯಾವ ಕೆಲಸಕ್ಕೂ ಅವರ ಬಳಿ ಹೋಗಿಲ್ಲ. ಯಾವುದೇ ಚಿಕ್ಕ ಕಾರ್ಯಕ್ರಮ ಇರಲಿ, ಅದನ್ನು ಮಾಡಲು ನಿಂತಾಗ ಅಲ್ಲಿಗೆ ಬಂದು ಫ್ಲಾಗ್ ಹಾಸ್ಟ್ ಮಾಡಿಕೊಡುತ್ತಾರೆ. ಯಾವಾಗ ಅವರ ಮನೆಗೆ ಹೋದಾಗಲು, ಕರೆದು ಗೌರವ ಕೊಟ್ಟು ಮಾತನ್ನಾಡಿಸುತ್ತಾರೆ. ಹೀಗಾಗಿ ಆ ವ್ಯಕ್ತಿಯ ಮೇಲೆ ನನಗೆ ಗೌರವ ಇದೆ. ನನಗೆ ಅವರು ವೈಯಕ್ತಿಕವಾಗಿ ಕೆಲಸ ಮಾಡಿಕೊಡುತ್ತಾರೆ. ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನ್ನಾಡಿಸುತ್ತಾರೆ ಎಂದಿದ್ದಾರೆ.
ರಾಜಕಾರಣಕ್ಕೆ ಬರ್ತೀರಾ ಎಂಬ ಪ್ರಶ್ನೆಗೆ, ರಾಜಕಾರಣಕ್ಕೆ ಬರಬೇಕು ಅಂತೇನು ಇಲ್ಲ. ಕೆಲವೊಬ್ಬರು ಬರುವ ಥರ ಮಾಡುತ್ತಿದ್ದಾರೆ. ನೋಡೋಣಾ ಮುಂದೆ. ಹೇಗೆ, ಏನು ಎಂಬುದನ್ನ ಎಂದು ಹೇಳಿದ್ದಾರೆ. ಈ ಮೂಲಕ ರಾಜಕಾರಣಕ್ಕೆ ಬರುವ ವಿಚಾರಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

