ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಾದ ಪ್ರತಿವಾದ ನಡೆದಿದೆ. ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಜಾಮೀನು ಅರ್ಜಿ ಕ್ಯಾನ್ಸಲ್ ಆಗಿದೆ. ಇತ್ತ ನಟ ದರ್ಶನ್ ಹಾಸಿಗೆ – ದಿಂಬು ಬೇಕು ಎಂಬ ಮನವಿಯನ್ನ ಮಾಡಿದ್ದಾರೆ. ಹಾಗಾದ್ರೆ ಕೋರ್ಟ್ ನಲ್ಲಿ ಏನೆಲ್ಲಾ ವಾದ – ಪ್ರತಿವಾದ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.
ದರ್ಶನ್ ಈ ಮೊದಲು ಅರೆಸ್ಟ್ ಆಗಿದ್ದಾಗ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸವಲತ್ತನ್ನ ನೀಡಲಾಗಿತ್ತು. ಆ ಫೋಟೋಗಳು, ವಿಡಿಯೋಗಳು ವೈರಲ್ ಆಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಈಗಾಗಲೇ ಸೂಚನೆಯನ್ನ ನೀಡಿದೆ. ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ಅವರಿಗೆ ನೀಡಬಾರದು ಎಂಬ ಸೂಚನೆ ಇರುವ ಕಾರಣ, ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲವೂ ಕಣ್ಗಾವಲಿನಲ್ಲಿ ಇದೆ. ಬೆಡ್ ಶೀಟ್ ಕೂಡ ಕೊಟ್ಟಿಲ್ಲ.

ಹೀಗಾಗಿ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ಇಂದು ಕೋರ್ಟ್ ಗೆ ಮನವಿಯೊಂದನ್ನ ಮಾಡಿದ್ದಾರೆ. ದರ್ಶನ್ ಅವರಿಗೆ ನಾವೂ ಮನೆ ಊಟ ಬೇಕು ಅಂತ ಕೇಳಿಲ್ಲ. 5 ಸ್ಟಾರ್ ಹೊಟೇಲ್ ಊಟ ಕೊಡಿ ಅಂತ ಕೇಳ್ತಿಲ್ಲ. ಬೆಡ್ ಶೀಟ್, ದಿಂಬು ಕೂಡ ಕೊಡ್ತಿಲ್ಲ ಎಂದು ಕೋರ್ಟ್ ಗೆ ತಿಳಿಸಿದ್ದಾರೆ. ಇದೇ ವೇಳೆ ಪವಿತ್ರಾ ಗೌಡ ಪರ ವಕೀಲರಾದ ಬಾಲಣ್ಣ ಅವರು, ಸುಪ್ರೀಂ ಕೋರ್ಟ್ ಆದೇಶವನ್ನ ನಾವೂ ಪ್ರಶ್ನೆ ಮಾಡ್ತಿಲ್ಲ. ಆದ್ರೆ ಆದೇಶದಲ್ಲಿ ಲೋಪಗಳಿವೆ. ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.
ದರ್ಶನ್ ಅವರನ್ನು ಮತ್ತೆ ಬಳ್ಳಾರಿ ಜೈಲಿಗೆ ಕಳುಹಿಸುವಂತೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಆ ಅರ್ಜಿ ಬಗ್ಗೆ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದೆ.




















