ಸುದ್ದಿಒನ್, ಹಿರಿಯೂರು, ಆಗಸ್ಟ್. 26 : ಐತಿಹಾಸಿಕ ಪ್ರಾಚ್ಯ ವಸ್ತುಗಳಾದ ಸ್ಮಾರಕಗಳು, ಶಾಸನಗಳು, ಶಿಲ್ಪ ಕಲೆಗಳು, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಗಿರೀಶ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕವು ವಿಶಿಷ್ಟವಾದ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಇಲ್ಲಿನ ಸ್ಮಾರಕಗಳು ಕೋಟೆ ಕೊತ್ತಲಗಳು, ಶಾಸನಗಳು, ಶಿಲಾಶಿಲ್ಪಗಳು ಹಾಗೂ ಪಾರಂಪರಿಕ ಕಟ್ಟಡಗಳು ಮುಂತಾದ ಪ್ರಾಚ್ಯಾವಶೇಷಗಳು ನಮ್ಮ ನಾಡಿನಲ್ಲಿ ಆಳ್ವಿಕೆ ನಡೆಸಿದ ಹಿಂದಿನ ರಾಜರು ನೀಡಿದ ಕೊಡುಗೆಗಳು. ನಮ್ಮ ನಾಡಿನ ಇತಿಹಾಸ ಮತ್ತು ಕಲೆ ವಾಸ್ತುಶಿಲ್ಪ ಇವುಗಳ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಲು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿವೆ ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ತಿಪ್ಪೇರುದ್ರಪ್ಪ ಮಾತನಾಡಿ ಇತಿಹಾಸದಲ್ಲಿ ಪ್ರಾಚೀನ ಕಾಲದಿಂದ ರಾಜ ಮಹಾರಾಜರುಗಳು ನೀಡಿದ ಕೊಡುಗೆಗಳನ್ನು ಸಂರಕ್ಷಿಸಿ ಕಾಪಾಡುವುದು ಹಾಗೂ ಅದರ ಬಗ್ಗೆ ತಿಳುವಳಿಕೆ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರಲ್ಲಿ ಅಗತ್ಯ ಎಂದು ಹೇಳಿದರು. ಇದೇ ವೇಳೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಗಿರೀಶ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಅಮೃತೇಶ್, ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಸಮಾಜ ವಿಜ್ಞಾನ ಕ್ಲಬ್ ನ ಅಧ್ಯಕ್ಷರಾದ ಹನುಮಂತಪ್ಪ , ಬಿ ಆರ್ ಪಿ ಚಿದಾನಂದ, ಸಿ ಶಿವಾನಂದ ಶಿಕ್ಷಣ ಸಂಯೋಜಕರು ಹಾಗೂ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಸಮಾಜ ವಿಜ್ಞಾನ ಶಿಕ್ಷಕರು ಇದ್ದರು. ಇಸಿಓ. ನಾಗರಾಜ್ ಸ್ವಾಗತಿಸಿದರು, ಎಸ್. ರಂಗಸ್ವಾಮಿ ವಂದಿಸಿದರು, ಪುಟ್ಟಸ್ವಾಮಿ ನಿರೂಪಿಸಿದರು.
















