ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬ್ರೇಕಿಂಗ್ ನ್ಯೂಸ್ ಒಂದು ಸದ್ದು ಮಾಡ್ತಿದೆ. ಕೆ.ಎನ್.ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದೇ ಹೇಳಲಾಗ್ತಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಎರಡು ವಿಕೆಟ್ ಪತನಗೊಂಡಿದೆ. ಈ ಮೊದಲು ಬಿ ನಾಗೇಂದ್ರ ಅವರು ಅವ್ಯವಹಾರದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ಮತಗಳ್ಳತನದ ಅಸ್ತ್ರ ಪ್ರಯೋಗಿಸಿದ್ದಾರೆ. ಮೋಸದಿಂದ ಮೋದಿ ಪ್ರಧಾನಿ ಆದ್ರೂ ಅಂತ ಹೇಳಿದ್ದಾರೆ. ಇದರ ನಡುವೆ ರಾಜಣ್ಣ ಮತಗಳ್ಳತನದ ಬಗ್ಗೆ ಮಾತನಾಡಿದ್ದರು. ನಮ್ಮದು ತಪ್ಪಿದೆ ಎಂದಿದ್ದರು. ಅಂದ್ರೆ 2024ರ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಲ್ಲಿ ನಮ್ಮದೆ ಕಾಂಗ್ರೆಸ್ ಸರ್ಕಾರವೇ ಇತ್ತು. ನಾವೇ ಮತದಾರರ ಪಟ್ಟಿಯ ಬಗ್ಗೆ ನೋಡಿಕೊಳ್ಳಬೇಕಿತ್ತು. ಇದರಲ್ಲಿ ನಮ್ಮ ತಪ್ಪು ಇದೆ. ವೋಟಿಂಗ್ ಲೀಸ್ಟ್ ತಯಾರಾಗಿದ್ದೆ ನಮ್ಮ ಸರ್ಕಾರದ ಅವಧಿಯಲ್ಲಿ ಎಂದಿದ್ದರು.
ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದು ನಿಜ. ಅದರಲ್ಲಿ ಯಾವ ಅನುಮಾನವು ಇಲ್ಲ. ಮಹದೇವಪುರ ಅಸೆಂಬ್ಲಿಯಲ್ಲಿ ನಮ್ಮ ಲೋಪ ಕೂಡ ಇದೆ ಎಂದಿದ್ದರು. ಈ ಹೇಳಿಕೆಯನ್ನ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದರು. ಸುರ್ಜೆವಾಲ ಅವರು ಹೇಳಿಕೆಯನ್ನ ಸರಿಯಾಗಿ ಗಮನಿಸಿ, ಇದು ನಮ್ಮ ಪಕ್ಷದ ಅಧಿಕೃತವಾದ ನಿಲುವಿಗೆ ವಿರುದ್ಧವಾದದ್ದು. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿರೋದು ಚುನಾವಣಾ ಆಯೋಗ. ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲು, ಬಿಜೆಪಿ ಜೊತೆಗೆ ಶಾಮೀಲಾಗಿ ಚುನಾವಣಾ ಆಯೋಗ ಅಕ್ರಮ ಎಸಗಿದೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದು ಸರಿಯಲ್ಲ. ಹೀಗಾಗಿ ರಾಜಣ್ಣರಿಂದ ರಾಜೀನಾಮೆ ಪಡೆಯಲು ಹೈಕಮಾಂಡ್ ಸೂಚನೆ ನೀಡಿದೆಯಂತೆ.




