ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯ: ಸಚಿವ ಡಿ.ಸುಧಾಕರ್ ಅವರಿಂದ ಉದ್ಘಾಟನೆ

1 Min Read

ಚಿತ್ರದುರ್ಗ. ಆಗಸ್ಟ್ 04: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯವನ್ನು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೋಮವಾರ ಉದ್ಘಾಟಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಮೈಕ್ರೋ ಬಯಾಲಜಿ ಪ್ರಯೋಗಾಲಯವನ್ನು ನಿರ್ಮಿಸಿದ್ದು, ಪ್ರಯೋಗಾಲಯದ ಮೂಲ ಉದ್ದೇಶ ಕುಡಿಯುವ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಪರೀಕ್ಷಿಸುವುದಾಗಿದೆ.

ಪ್ರಯೋಗಾಲಯದ ನವೀಕರಣಕ್ಕಾಗಿ WQMSP ಲೆಕ್ಕ ಶೀರ್ಷಿಕೆಯಡಿ ರೂ. 23.60 ಲಕ್ಷ ನಿಗಧಿಯಾಗಿದ್ದು, ಪ್ರಯೋಗಾಲಯದ ಉಪಕರಣಗಳಿಗಾಗಿ ರೂ. 21.57 ಲಕ್ಷ ಹಾಗೂ ಕೆಮಿಕಲ್ಸ್ ಗಾಗಿ ರೂ. 9.63 ಲಕ್ಷಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು,  ಗ್ರಾಮೀಣ ಪ್ರದೇಶದಲ್ಲಿ ಕಾಡುತ್ತಿರುವ ಸಾಂಕ್ರಾಮಿಕ, ವಾಂತಿ ಮತ್ತು ಅತಿಸಾರ ಪ್ರಕರಣಗಳನ್ನು ತಡೆಗಟ್ಟುವುದು ಈ ಪ್ರಯೋಗಾಲಯದ ಮೂಲ ಉದ್ದೇಶವಾಗಿದೆ.

ನೀರಿನ ಮಾದರಿಯಲ್ಲಿ ಸೂಕ್ಷ್ಮ ಜೀವಿಗಳನ್ನು ಅಂದರೆ
E-coli, Coliform  ಅಂತ ಜೀವಿಗಳು ಕಂಡು ಬಂದರೆ ಕೂಡಲೆ ಗ್ರಾಮ ಮಟ್ಟದಲ್ಲಿ ಜನಗಳಿಗೆ ಕಾಯಿಲೆಯ ಹಾಗೂ ಇನ್ನಿತರೆ ತೊಂದರೆಗಳ ಬಗ್ಗೆ ಎಚ್ಚರಿಕೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಬೋರ್‍ವೆಲ್, ಸಿಂಟೆಕ್ಸ್ ವಾಟರ್, ಆರ್‍ಓ ಘಟಕದ ನೀರು ಹಾಗೂ ಕುಡಿಯುವ ನೀರಿನ ಮೂಲಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks