ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆಗಸ್ಟ್. 02: ಒಳ ಮೀಸಲಾತಿ ವರದಿ ಸರ್ಕಾರದ ಕೈಗೆ ಸೋಮವಾರ ಸೇರಲಿದೆ. ಮುಂದಿನ 15 ದಿನಗಳಲ್ಲಿ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಲಿದೆ, ಕಳೆದ 35 ವರ್ಷಗಳ ಹೋರಾಟಕ್ಕೆ ಅಂತ್ಯವನ್ನು ಹಾಡಲಿದೆ. 2024 ಆಗಸ್ಟ್ 01 ರ ನಂತರ ನಡೆದ ವಿವಿಧ ರೀತಿಯ ಹೋರಾಟಕ್ಕೆ ಯಾವುದೆ ಬೆಲೆ ಇಲ್ಲ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಇರಲಿಲ್ಲ ಬರೀ ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದಾಗಿತ್ತು ಆದರೆ ಆಗಸ್ಟ್ 01, 2024ರಂದು ಸುಪ್ರಿಂ ಕೋರ್ಟ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿ ಮಾಡಬಹುದೆಂದು ತೀರ್ಪು ನೀಡಿದ ನಂತರ ರಾಜ್ಯ ಸರ್ಕಾರ ಚುರುಕಾಗಿ ಜಾರಿ ಮಾಡಲು ಮುಂದಾಯಿತು. ಆದರೆ ಸರಿಯಾದ ಜಾತಿಯ ಮಾಹಿತಿ ಇಲ್ಲದಿರುವುದರಿಂದ ಮತ್ತೇ ಹೊಸದಾಗಿ ಮಾದಿಗ ನಾಗ ಮೋಹನ್ ದಾಸ್ ಆಯೋಗ ಜಾತಿ ಗಣತಿಯನ್ನು ಮಾಡುವುದರ ಮೂಲಕ ವರದಿಯನ್ನು ಸಿದ್ದಪಡಿಸಿದೆ. ಇದನ್ನು ಆಗಸ್ಟ್ 4 ರಂದು ಸರ್ಕಾರಕ್ಕೆ ತಲುಪಲಿದೆ ಇದಾದ ನಂತರ 20 ದಿನಗಳೊಗಾಗಿ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಯಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ಎಲ್ಲೂ ಸಹಾ ಹೇಳಿಲ್ಲ. ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಕೆಲವು ಜನ ಮಾದಿಗ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಒಳ ಮೀಸಲಾತಿ ಜಾರಿಯಾಗಬೇಕೆಂದು ಕಳೆದ 35 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲಾಗಿತ್ತು, ಸಮಾಜದಲ್ಲಿ ಇದಕ್ಕೆ ಬೆಲೆ ಇದೆ. ಆದರೆ ಸುಪ್ರಿಂ ಕೋರ್ಟ ತೀರ್ಪು ನೀಡಿದ ನಂತರ ನಡೆದ ಹೋರಾಟಗಳಿಗೆ ಯಾವುದೆ ಬೆಲೆ ಇಲ್ಲ. ಒಳ ಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರಕ್ಕೆ ಕಾಲಾವಕಾಶವನ್ನು ನೀಡಬೇಕಿದೆ. ಅದನ್ನು ಮಾಡದೆ ಒಳ ಮಿಸಲಾತಿ ಜಾರಿಯಾಗಿಲ್ಲ ಎಂದು ಬೊಬ್ಬೆ ಹೊಡೆಯುವುದು ಪ್ರತಿಭಟನೆ ಮಾಡುವುದು ಸರಿಯಲ್ಲ. ಇದರ ಬದಲಿಗೆ ಸರ್ವೆ ಪ್ರಾರಂಭವಾದಾಗ ನಮ್ಮ ಸಮುದಾಯ ಇರುವ ಜಾಗಕ್ಕೆ ಹೋಗಿ ಮಾದಿಗ ಎಂದು ಬರೆಸುವಂತೆ ಜಾಗೃತಿಯನ್ನು ಮೂಡಿಸುವಂತ ಕಾರ್ಯವನ್ನು ಮಾಡಬೇಕಿತ್ತು. ಇದು ಬಿಟ್ಟು ಈಗ ಹೋರಾಟ, ಪ್ರತಿಭಟನೆಯನ್ನು ಮಾಡುವುದು ಸರಿಯಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಒಳ ಮೀಸಲಾತಿ ಜಾರಿಯಾಗುವವರೆಗೂ ರಾಜ್ಯದಲ್ಲಿ ಯಾವ ಹುದ್ದೆಗಳು ತುಂಬಿಲ್ಲ, ಜಾರಿ ಅಂದ ಮೇಲೆ ಹುದ್ದೆಗಳು ತುಂಬುವಂತ ಕಾರ್ಯವಾಗಲಿದೆ. ಅಲ್ಲಿಯವರೆಗೂ ಮಾದಿಗರನ್ನು ದಾರಿ ತಪ್ಪಿಸುವಂತ ಕೆಲಸ ಮಾಡಬಾರದು. ನಾವು ಬೇಡ ಅಂದ್ರೂ ಕೂಡ ಜಾರಿಗೆ ತರುವೆ ಎಂದು ಸಿಎಂ ಹೇಳಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಮಾದಿಗರಿಗೆ ಮಾಹಿತಿಯನ್ನು ಮೂಡಿಸಲಾಗಿದೆ. ಯಾವ ಪಾರ್ಟಿಯನ್ನು ನಾನು ಟೀಕೆಯನ್ನು ಮಾಡುವುದಿಲ್ಲ. ಒಳ ಮೀಸಲಾತಿ ಜಾರಿ ಮಾಡಮಾತಾಡಬೇಕು. ಪಾದಯಾತ್ರೆ ಮಾಡುವವರು ಹಿಂದೆ ನಮ್ಮ ಜನರು ಹೋಗಬಾರದು ಎಂದ ಅವರು, ಹೋರಾಟ ಮಾಡಿ ನ್ಯಾಯ ರೀತಿಯಲ್ಲಿ ಮಾತಾಡಬೇಕು. ಹಿಂದೆ ಹೋರಾಟ ಮಾಡಿದವರಿಗೆ ನಾನು ಗೌರವ ಸೂಚಿಸುತ್ತೇನೆ. ಒಳ ಮೀಸಲಾತಿ ವರದಿ ಸರ್ಕಾರದ ಕೈಗೆ ಸೋಮವಾರ ಸೇರಲಿದೆ.15 ದಿನಗಳ ಕಾಲದಲ್ಲಿ ಜಾರಿಯಾಗಲಿದೆ. ಸರ್ಕಾರದ ಯಾವುದೇ ಮೋಸಮಾಡಿಲ್ಲ. ನೈಜ ಹೋರಾಟಗಾರರು ಶಾಂತಿಯುತವಾಗಿ ಸುಮ್ಮನೆ ಇದ್ದರೆ, ಆದರೆ ಮಧ್ಯೆ ಬಂದ ಕೆಲ ಹೋರಾಟಗಾರರು ಸಮುದಾಯವನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ನಿರುದ್ಯೋಗಿ ಯುವಜನತೆಗೆ ಉದ್ಯೋಗ ನೇಮಕಾತಿಯಲ್ಲಿ ಒಂದು ವರ್ಷ ಸಡಿಲಿಕೆ ಮಾಡುವುದಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅಂಜನೇಯ ತಿಳಿಸಿದರು.
ಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ನ್ಯಾಯಾವಾದಿಗಳಾದ ಶರಣಪ್ಪ, ರವಿಂದ್ರ, ಕೋಟಿ, ವಿಜಯಕುಮಾರ್ ಹಾಜರಿದ್ದರು.


