ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 31 : ಹೊಸದುರ್ಗ ತಾಲ್ಲೂಕಿನ ದೊಡ್ಡಘಟ್ಟ, ಜಂತಿಕೊಳಲು, ಚಳ್ಳಕೆರೆ ತಾಲ್ಲೂಕಿನ ಬೂದಿಹಾಳ್, ದೊಡ್ಡಬೀರನಹಳ್ಳಿ, ಕೋನಿಗರಹಳ್ಳಿ, ಹಿರಿಯೂರು ತಾಲ್ಲೂಕಿನ ಈಶ್ವರಗೆರೆ, ಕಂಬತ್ತಹಳ್ಳಿ ಗ್ರಾಮಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲವು ವರ್ಷಗಳಿಂದ ದಲಿತರ ಮೇಲೆ ದೌರ್ಜನ್ಯ, ಬಹಿಷ್ಕಾರ ನಡೆಯುತ್ತಿದ್ದು, ಸರ್ಕಾರದಿಂದ ಇದುವರೆವಿಗೂ ಯಾವುದೇ ಪರಿಹಾರ ನೀಡಿಲ್ಲದಿರುವುದನ್ನು ವಿರೋಧಿಸಿ ಮಾದಿಗ ಮಹಾಸಭಾದಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ದೌರ್ಜನ್ಯಕ್ಕೊಳಗಾದವರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಜಮೀನು ಉಳ್ಳವರಿಗೆ ಕೊಳವೆಬಾವಿಗಳನ್ನು ಕೊರೆಸಿಕೊಡುವಂತೆ ಅನೇಕ ವರ್ಷಗಳಿಂದಲೂ ಹೋರಾಟ ನಡೆಯುತ್ತಿದೆ. ನಿವೇಶನ, ಮನೆ, ಜಮೀನು ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಸಂತ್ರಸ್ಥರಿಗೆ ಇಲ್ಲಿಯವರೆಗೂ ಪರಿಹಾರದ ಹಣ ಮಂಜೂರಾಗಿಲ್ಲ. ತಕ್ಷಣವೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ದಲಿತರ ಮೇಲೆ ದೌರ್ಜನ್ಯವೆಸಗಿರುವವರಿಗೆ ನ್ಯಾಯಾಲಯ ಬೇಗನೆ ಜಾಮೀನು ನೀಡಬಾರದು. ಕನಿಷ್ಟ ಮೂರು ತಿಂಗಳಾದರೂ ನ್ಯಾಯಾಂಗ ಬಂಧನದಲ್ಲಿರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರು ಸಂತ್ರಸ್ಥರ ಪರ ವಾದ ಮಂಡಿಸಬೇಕೆಂದು ವಿನಂತಿಸಿದರು.

