ಸುದ್ದಿಒನ್, ಚಿತ್ರದುರ್ಗ, ಜುಲೈ. 30 : ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ, ಕ್ಷೇತ್ರದ ಎಲ್ಲಾ ಹಳ್ಳಿಗಳನ್ನು ಸುತ್ತಿ ಅಭಿವೃದ್ಧಿಯ ಒಂದು ಭಾಗವನ್ನು ರೂಪಿಸುವೆ ಎಂದು ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರು ತಿಳಿಸಿದರು.
ತಾಲೂಕಿನ ಸೊಲ್ಲಾಪುರ ನಾಯಕರಹಟ್ಟಿ ಹಾಗೂ ಉಪ್ಪಾನಾಯಕನಹಳ್ಳಿ ಗ್ರಾಮಗಳಲ್ಲಿ ಬುಧುವಾರ ಜಲಜೀವನ್ ಮಿಷನ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ಕ್ಷೇತ್ರದ ಜನರು ನನ್ನನ್ನು ಮತಗಳನ್ನ ನೀಡುವುದರ ಮೂಲಕ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ, ಅವರ ಕಾಳಜಿಗೆ ನನ್ನ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನಹರಿಸುವೆ, ಯಾರು ಏನೇ ನನ್ನ ಬಗ್ಗೆ ಅಪಪ್ರಚಾರ ಮಾಡಿದರು ಕೂಡ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡುವೆ ಎಂದು ತಿಳಿಸಿದರು.
ಅಭಿವೃದ್ಧಿ ವಿಚಾರಗಳಲ್ಲಿ ಯಾವ ರಾಜಕಾರಣಗಳನ್ನು ಮಾಡದೆ ಎಲ್ಲರೂ ನಮ್ಮವರೇ ಎನ್ನುವ ಮನೋಭಾವನೆಯಲ್ಲಿ ಬದುಕುತ್ತಿರುವವನು ನಾನು, ರಾಜಕಾರಣ ಶಾಶ್ವತವಲ್ಲ ಅಭಿವೃದ್ಧಿ ಕಾರ್ಯಗಳೇ ಶಾಶ್ವತ ಹಾಗಾಗಿ ಕ್ಷೇತ್ರದ ವಿವಿಧ ಗ್ರಾಮಗಳ ಕುಂದು ಕೊರತೆಗಳನ್ನು ಪಟ್ಟಿಮಾಡಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸಗಳ ಭೂಮಿ ಪೂಜೆಯನ್ನು ನೆರೆವೇರಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಸಾಕಷ್ಟು ಸರ್ಕಾರದ ಯೋಜನೆಗಳು ಜಾರಿ ಇವೆ ಅಂತಹ ಯೋಜನೆಗಳನ್ನು ಮಹಿಳೆಯರು ಬಳಸಿಕೊಂಡು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸೊಲ್ಲಾಪುರ ನಾಯಕರಹಟ್ಟಿ ಸಾರ್ವಜನಿಕರಿಗೆ ಹಕ್ಕು ಪತ್ರಗಳ ವಿತರಣ ಕಾರ್ಯಕ್ರಮವನ್ನು ಸಚಿವರ ಸಮ್ಮುಖದಲ್ಲಿ ವಿತರಣೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಕೆಡಿಪಿ ಸದಸ್ಯರಾದ ಸಂತೋಷ್, ನಾಗರಾಜ್, ಜಾನುಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ನಿಜಲಿಂಗಪ್ಪ, ವೆಂಕಟಚಲ, ಚಿಂತಾಮಣಿ, ಅಂಜಿನಿ ಹಾಗೂ ಗ್ರಾಮಸ್ಥರಾದ ಹನುಮಂತಪ್ಪ, ಶಶಿಕುಮಾರ್, ರಮೇಶ್, ಮಯೂರ್, ಸ್ವಾಮಿ, ರಂಗಪ್ಪ, ಲೋಕೇಶ್, ಕುಮಾರ್, ಸ್ವಾಮಿ ಹಾಗೂ ಇತರರು ಇದ್ದರು.



















