ಸುದ್ದಿಒನ್, ಹಿರಿಯೂರು, ಜುಲೈ. 22 : ಮಾರಕವಾದ ಡೆಂಗಿರೋಗದಿಂದ ತಪ್ಪಿಸಿಕೊಳ್ಳಲು ಸ್ವಚ್ಛತೆಯೊಂದೇ ಪರಿಹಾರವಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗುವ ತ್ಯಾಜ್ಯ ವಸ್ತು ಹಾಗೂ ಇನ್ನಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ದಿಂಡವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೃಥ್ವಿರಾಣಿ ಬೆಳೆಗೆರೆ ತಿಳಿಸಿದರು.
ತಾಲೂಕಿನ ದಿಂಡವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದರು.

ಡೆಂಗ್ಯೂ ವೈರಸ್ನಿಂದ ಡೆಂಗ್ಯೂ ಜ್ವರ ಬರುತ್ತದೆ. ಈಡಿಸ್ ಎಂಬ ಜಾತಿಯ ಸೊಳ್ಳೆಯಿಂದ ಹರಡುವ ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಬದಲಾಗಿ ಸೊಳ್ಳೆ ನಿಯಂತ್ರಣವೇ ಮುಖ್ಯ ಎಂದರು. ಸಾರ್ವಜನಿಕರು ಬಿಸಾಡಿದ ಹೆಲ್ಮೆಟ್, ಶೂ, ಒಡೆದ ಮೊಟ್ಟೆ ಸಿಪ್ಪೆ, ಮನಿ ಪ್ಲಾಂಟ್ ಬೆಳೆಸಲು ಇಡುವ ಪ್ಲಾಸ್ಟಿಕ್ ಬಾಟಲಿ ಇತರೆಗಳಲ್ಲಿ ಇವು ಉತ್ಪತ್ತಿಯಾಗುತ್ತವೆ. ನಿಂತ ನೀರಿನ ಜಾಗಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊ ಳಿಸಿ, ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಸದಸ್ಯ ಸಣ್ಣ ತಿಮ್ಮಣ್ಣ, ಆರೋಗ್ಯ ನಿರೀಕ್ಷಕರುಗಳಾದ ದಾದಾ ಪೀರ್, ರೆಹಮಾನ್, ಗೋವರ್ಧನ್, ಮಹಾಂತೇಶ್, ಆಸ್ಪತ್ರೆ ನರ್ಸ್ ರಕ್ಷಿತಾ, ಆಶಾ ಕಾರ್ಯಕರ್ತೆಯರು ಹಾಗೂ ಇತರರಿದ್ದರು.


















