ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜೂನ್. 30 : ನಗರದ ನಗರಸಭೆಗೆ ನಾಲ್ಕನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶಿಲ್ಪ ಮುರಳಿ ನಗರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಶಾಸಕ ಟಿ ರಘುಮೂರ್ತಿ ಶಿಲ್ಪಾರವರನ್ನು ಅಭಿನಂದಿಸಿ ಮಾತನಾಡಿ ನಗರಸಭೆ ಅಧ್ಯಕ್ಷೆ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿತ್ತು. ಆದಕಾರಣ ಶಿಲ್ಪ ಮುರಳಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚಳ್ಳಕೆರೆ ನಗರಸಭೆಯ ಅಧಿಕಾರವಧಿ ನವೆಂಬರ್ ನಾಲ್ಕಕ್ಕೆ ಕೊನೆಗೊಳ್ಳಲಿದೆ. ಶಿಲ್ಪ ರವರು ನಗರದ ಎಲ್ಲಾ ವಾರ್ಡ್ ಗಳ ಸಮಸ್ಯೆಗಳನ್ನು ಅರಿತು ಸಾರ್ವಜನಿಕರ ಕುಂದು ಕೊರತೆಗಳಿಗೆ ಅನುಸಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಶಿಲ್ಪಾ ಮಾತನಾಡಿ ನನ್ನನ್ನು ನಗರ ಸಭೆ ಅಧ್ಯಕ್ಷರನ್ನಾಗಲು ಸಹಕರಿಸಿದ ಶಾಸಕ ಟಿ ರಘುಮೂರ್ತಿ ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಮಾಜಿ ನಗರಸಭಾ ಸದಸ್ಯ ಕೆ ಸಿ ನಾಗರಾಜ್ ರವರಿಗೆ ಚಿರೃಣಿಯಾಗಿರುತ್ತೇನೆ. ಶಾಸಕರ ಮಾರ್ಗದರ್ಶನದಲ್ಲಿ ಹಾಗೂ ಎಲ್ಲಾ ಸದಸ್ಯರ ಸಹಮತ ಪಡೆದು ನಗರದ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಹಾಗೂ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.


