ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಅಸುನೀಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಮೃತರ ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ನಿನ್ನೆಯೇ ಘಟನೆಗೆ ಸಂಬಂಧಿಸಿದಂತೆ ಆರ್ಸಿಬಿ ಕೂಡ ಬೇಸರ ವ್ಯಕ್ತಪಡಿಸಿತ್ತು. ಮೃತರ ಆತ್ಮಕ್ಕೆ ಶಾಂತಿಕೋರಿ, ಸಂತಾಪವನ್ನು ಸೂಚಿಸಿತ್ತು. ಇಂದು ಪರಿಹಾರವನ್ನು ಘೋಷಣೆ ಮಾಡಿದೆ.
ಈಗಾಗಲೇ ಸರ್ಕಾರದಿಂದ ಕೂಡ ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ತಲಾ 10 ಲಕ್ಷ ಘೋಷಣೆ ಮಾಡಿದ್ದು, ಗಾಯಾಳುಗಳಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನು ಸರ್ಕಾರ ಹೊತ್ತಿದೆ. ಇದರ ನಡುವೆ ಇದೀಗ ಆರ್ಸಿಬಿ ಕೂಡ ಪರಿಹಾರವನ್ನು ಘೋಷಣೆ ಮಾಡಿದೆ. ಘಟನೆ ನಡೆದ ಒಂದು ದಿನದ ಬಳಿಕ ಪರಿಹಾರವನ್ನು ಘೋಷೊಸಿದ್ದು, ಮೃತರಿಗೆ ತಲಾ 10 ಲಕ್ಷ ರೂಪಾಯಿ ಆರ್ಥಿಕ ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದೆ.
ಜೊತೆಗೆ ಫ್ರಾಂಚೈಸಿಯು ಆರ್ಸಿಬಿ ಕೇರ್ಸ್ ಎಂಬ ನಿಧಿಯನ್ನು ರಚಿಸುವುದಾಗಿಯೂ ತಿಳಿಸಿದೆ. ಆ ಮೂಲಕವೇ ದುರಂತದಲ್ಲಿ ಗಾಯಗೊಂಡ ಅಭಿಮಾನಿಗಳಿಗೂ ಸಹ ಸಹಾಯ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಆರ್ಸಿಬಿಯ ನಡೆಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಆರ್ಸಿಬಿಯಿಂದ ಯಾವುದೇ ಸಂತಾಪದ ಪ್ರತಿಕ್ರಿಯೆಗಳು ಬಂದಿರಲಿಲ್ಲ. ನಾಲ್ಕೈದು ಘಂಟೆಗಳ ಬಳಿಕ ಫ್ರಾಂಚೈಸಿಯೂ ಸಂತಾಪವನ್ನು ಸೂಚಿಸಿತ್ತು. ಅದೇನೆ ಇರಲಿ ಹದಿನೆಂಟು ವರ್ಷಗಳ ಕನಸು ನನಸು ಮಾಡಿತು ಎಂದು ಖುಷಿಪಡಬೇಕೋ ಅಥವಾ ಆರ್ಸಿಬಿಯ ಮೊದಲ ಗೆಲುವು ಸಾವನ್ನ ಹೊತ್ತು ತಂದಿದೆ ಎಂದು ಬೇಸರ ಮಾಡಿಕೊಳ್ಳಬೇಕೊ ಅರ್ಥವಾಗುತ್ತಿಲ್ಲ. ಆರ್ಸಿಬಿ ಎಂದ ಕೂಡಲೇ ಹನ್ನೊಂದು ಜನರ ಸಾವು ಕಣ್ಣ ಮುಂದೆ ಬಾರದೆ ಇರಲಾರದು.










