ಮುತ್ತಪ್ಪ ರೈ ಪುತ್ರನ ಮೇಲೆ ನಿನ್ನೆ ಗುಂಡಿನ ದಾಳಿ ನಡೆದಿದೆ. ಬಿಡದಿಯ ಮನೆಯಲ್ಲಿದ್ದಾಗ ದಾಳಿ ಮಾಡಿದ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ತಕ್ಷಣವೇ ರಿಕ್ಕಿ ರೈ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿದೆ. ಮೂಗು ಮತ್ತು ಭುಜಕ್ಕೆ ಗುಂಡಿನ ದಾಳಿಯಿಂದಾಗಿ ಹೆಚ್ಚು ಗಾಯವಾಗಿದೆ. ಕೊಂಚ ಚೇತರಿಸಿಕೊಂಡಿರುವ ರಿಕ್ಕಿ ರೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದವರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ತನಿಖೆಯನ್ನು ಚುರುಕುಗೊಳಿಸಿರುವ ಬಿಡದಿ ಪೊಲೀಸರು ರಿಕ್ಕಿ ರೈ ನೀಡಿರುವ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾರೆ. ರಿಕ್ಕಿ ರೈ ಹೇಳಿಕೆ ನೀಡಿರುವಂತೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಇವರೇ ನನ್ನ ಮೇಲೆ ಅಟ್ಯಾಕ್ ಮಾಡಿಸಿರುವುದು ಎಂದು ಹೇಳಿಕೆ ನೀಡಿದ್ದಾರಂತೆ. ರಿಕ್ಕಿ ರೈ ಹೇಳಿಕೆ ನೀಡುವುದಕ್ಕೂ ಮುನ್ನವೇ ಈ ನಾಲ್ವರ ಮೇಲೂ ಎಫ್ಐಆರ್ ಕೂಡ ದಾಖಲಾಗಿತ್ತು. ಅಷ್ಟೇ ಅಲ್ಲ ಈ ಅಟ್ಯಾಕ್ ಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗಿದೆ.
ರಿಕ್ಕಿ ರೈ ನೀಡಿರುವ ಹೇಳಿಕೆ ಪ್ರಕಾರ, ನಾನು ರಷ್ಯಾದಲ್ಲಿದ್ದೆ. ಜಾಮೀನು ವಿವಾದ ಕೋರ್ಟ್ ನಲ್ಲಿದೆ. ಕೇಸ್ ಇದ್ದ ಕಾತಣ ಬೆಂಗಳೂರಿಗೆ ಬಂದಿದ್ದೆ. ಸದಾಶಿವನಗರ ಹಾಗೂ ಬಿಡದಿಯಲ್ಲಿ ಇರುತ್ತೇನೆ. ಬೆಳಗ್ಗೆ ಎರಡು ಕಾಲ್ ಬಂತು. ಬಿಡದಿ ಮನೆಯಿಂದ ಹೊರಟಾಗ ಹೊರಗಡೆ ಬಂದ ಕೂಡಲೇ ನನ್ನ ಮೇಲೆ ಅಟ್ಯಾಕ್ ಮಾಡಲಾಗಿದೆ. ನನ್ನ ಕೈ ಹಾಗೂ ಮೂಗಿಗೆ ಗುಂಡು ತಗುಲಿದೆ. ನನ್ನ ಡ್ರೈವರ್ ಹಾಗೂ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದರು. ರಾಕೇಶ್ ಮಲ್ಲಿ ಹಾಗೂ ಅನುರಾಧ ಅವರೇ ಅಟ್ಯಾಕ್ ಮಾಡಿಸಿದ್ದಾರೆ ಎಂದಿದ್ದಾರೆ.

