ತುಮಕೂರು; ಜಾತಿಗಣತಿ ವರದಿಯ ಅಂಕಿ ಅಂಶಗಳು ವೈರಲ್ ಆಗಿದ್ದೇ ಆಗಿದ್ದು ಎಲ್ಲಾ ಕಡೆಯಿಂದಾನೂ ವಿರೋಧ ವ್ಯಕ್ತವಾಗ್ತಾ ಇದೆ. ಈ ಸಂಬಂಧ ಸಿದ್ದಗಂಗಾ ಮಠದ ಶ್ರೀಗಳು ಕೂಡ ಮಾತನಾಡಿದ್ದು, ಸರ್ಕಾರ 10 ವರ್ಷದ ಹಿಂದಿನದ್ದನ್ನು ಪ್ರಕಟ ಮಾಡುವುದು ನ್ಯಾಯೋಜಿತವಲ್ಲ. ಹೊಸ ಸಮೀಕ್ಷೆ ಮಾಡಿದರೆ ಒಳ್ಳೆಯದು. ಜಾತಿಗಣತಿ ಮಾಡಿ, ಮತ್ತೊಮ್ನೆ ವೈಜ್ಞಾನಿಕವಾಗಿ ಎಲ್ಲರನ್ನೂ ಕೇಳಲಿ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕಳೆದ 10 ವರ್ಷದ ಹಿಂದೆ ಮಾಡಿರುವ ವರದಿಯನ್ನು ಈಗ ಯಾಕೆ ಪ್ರಕಟ ಮಾಡ್ತಾ ಇದಾರೆ ಅನ್ನೋದು ತಿಳಿಯುತ್ತಿಲ್ಲ. ಹತ್ತು ವರ್ಷದಿಂದ ಈಚೆಗೆ ಅದೆಷ್ಟೋ ಬದಲಾವಣೆಗಳು ಆಗಿರಬಹುದು. ಜನಸಂಖ್ಯೆಯೂ ಹೆಚ್ಚಿರಬಹುದು. ಅದೆಲ್ಲವೂ ಇಂದಿಗೆ ವ್ಯತ್ಯಾಸ ಆಗಲಿದೆ. ಹಾಗಾಗಿ ಹತ್ತು ವರ್ಷದ ಹಿಂದಿನದ್ದನ್ನ ಇಂದು ಪ್ರಕಟ ಮಾಡುವುದು ನ್ಯಾಯಯೋಜಿತವಲ್ಲ. ಸರ್ಕಾರ ಸಮಿತಿ ರಚನೆ ಮಾಡಿ, ಜಾತಿ ಗಣನೆ ಮಾಡಲಿ. ಅದರ ಆಧಾರದ ಮೇಲೆ ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆ ತಿಳಿದುಕೊಂಡು ಆಯಾ ವರ್ಗಗಳಿಗೆ ನ್ಯಾಯ ಒದಗಿಸಬೇಕು ಅನ್ನೋದು ಶ್ಲಾಘನೀಯ.
ಈ ಗೊಂದಲವನ್ನು ನಿವಾರಣೆ ಮಾಡಿ ಪ್ರತಿಯೊಬ್ಬರನ್ನೂ ಭೇಟಿ ಮಾಡಬೇಕು. ಎಲ್ಲರಿಗೂ ನ್ಯಾಯ ಒದಗಿಸಿಕೊಡುವಂತಹ ಕೆಲಸ ಮಾಡಬೇಕು. ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು, ನಿರ್ಗತಿಕರಿದ್ದಾರೆ. ಅವರೆಲ್ಲರನ್ನೂ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅವರಿಗೆ ನೌಕರಿ, ಉತ್ತಮ ಶಿಕ್ಷಣ ಒದಗಿಸಿಕೊಡಬೇಕಿದೆ. ಆಗಾದರೆ ಮಾತ್ರ ಆರೋಗ್ಯಪೂರ್ಣ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಅಸಮಾನತೆ ಹೋಗಲಾಡಿಸಬೇಕು, ಸಮಾನತೆಯನ್ನ ತರಬೇಕು. ಹಿಂದುಳಿದವರನ್ನ ಮುಂದೆ ತರಬೇಕು, ಬಡವರನ್ನ ಮೇಲೆತ್ತಬೇಕು ಎನ್ನುವ ಉದ್ದೇಶ ಒಳ್ಳೆಯದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.










