ಏಕನಾಥೇಶ್ವರಿ ಸಿಡಿ ಉತ್ಸವಕ್ಕೆ ಮಳೆಯ ಸಿಂಚನ : ಸಾವಿರಾರು ಭಕ್ತರು ಭಾಗಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 12 :
ಐತಿಹಾಸಿಕ ಚಿತ್ರದುರ್ಗದ ಮೇಲುದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಅಂಗವಾಗಿ ನಗರದ ಕೋಟೆ ರಸ್ತೆಯಲ್ಲಿನ ಪಾದಗುಡಿಯ ಬಳಿಯಲ್ಲಿನ ಶನಿವಾರ ನಡೆದ ಏಕನಾಥೇಶ್ವರಿ ದೇವಿ ಸಿಡಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಇದೇ ಪ್ರಥಮ ಬಾರಿಗೆ ಸಿಡಿ ಉತ್ಸವದಲ್ಲಿ ಮಳೆ ಬಂದಿದ್ದು, ಅದರಲ್ಲೂ ಸಹಾ ಭಕ್ತ ಸಮೂಹ ಸಿಡಿಯನ್ನು ಆಡಿದರು, ಇದನ್ನು ವೀಕ್ಷಿಸಲು ಬಂದಿದ್ದ ಭಕ್ತರೂ ಸಹಾ ಮಳೆಯನ್ನು ಲೆಕ್ಕಿಸದೆ ಸಿಡಿಯನ್ನು ವೀಕ್ಷಣೆ ಮಾಡಿದರು.


ಏಪ್ರಿಲ್ 01 ರಂದು ಅಮ್ಮನವರ ಜಾತ್ರೆಯ ಸಾರು ಹಾಕಿದ್ದು, ಏ.05 ರಂದು ಕಂಕಣಧಾರಣೆ, ಭಂಡಾರ ಪೂಜೆ ಮತ್ತು ರುದ್ರಾಭಿಷೇಕ, ಏ.06ರ ರಾತ್ರಿ ರಾಜಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ, ಏ.07ರಂದು ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜಾ ಕಾರ್ಯಕ್ರಮ ಮಯುರೋತ್ಸವ (ನವಿಲು ಉತ್ಸವ) ಏ.09ರಂದು ಬೆಟ್ಟದಿಂದ ಅಮ್ಮನವರು ಕೆಳಗೆ ಇಳಿದಿದ್ದು, ಏ.10ರಂದು ಕರುವಿನಕಟ್ಟೆ ಭಕ್ತಾಧಿಗಳಿಂದ ಸೇವೆ, ಉತ್ಸವ. ಏ.11ರಂದು ಅಕ್ಟೋತ್ಸವ ಮತ್ತು ಹೂವಿನ ಉತ್ಸವ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.

ಇಲ್ಲಿನ ಗ್ರಾಮ ದೇವತೆ ಏಕನಾಥೇಶ್ವರಿ ದೇವಿಯ ಸಡಿ ಉತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಸಂಜೆಯ ಗೋಧೂಳಿ ಸಮಯ ಆರಂಭವಾಗುತ್ತಿದ್ದಂತೆ ಸಿಡಿ ಉತ್ಸವದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ಸಂಜೆ ಪಶ್ಚಿಮ ದಿಗಂತ ಕೆಂಪಾಗುತ್ತಿದ್ದಂತೆ ಏಕನಾಥೇಶ್ವರಿ ದೇವಿಯ ಪವಿತ್ರ ಕಳಶ ಮತ್ತು ದಂಡವನ್ನು 40 ಅಡಿ ಉದ್ದ ಎರಡು ಅಡಿ ವ್ಯಾಸದ ಬೃಹತ್ ಸಿಡಿ ಕಂಬಕ್ಕೆ ಕಟ್ಟಲಾಯಿತು. ಗ್ರಾಮದ ಹಿರಿಯರಿಂದ ಸೂಚನೆ ದೊರೆಯುತ್ತಿದ್ದಂತೆ ಸಿಡಿ ಕಂಬವನ್ನು ಮೂರು ಬಾರಿ ಭಕ್ತರ ಉದ್ಘೋಷದ ನಡುವೆ ತಿರುಗಿಸಲಾಯಿತು. ಜಾನಪದ ಮೇಳಗಳಾದ ಡೊಳ್ಳು ಕುಣಿತ, ಹಲಗೆ ಮೇಳ, ಉರುಮೆ ಮತ್ತು ವಾಲಗಗಳ ಸದ್ದು ಉತ್ಸವಕ್ಕೆ ಕಳೆ ನೀಡಿತ್ತು.

ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಶನಿವಾರ ಮುಂಜಾನೆಯಿಂದಲೇ ಏಕನಾಥೇಶ್ವರಿ ದೇವಿಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ಇಂದು ಬಿಸಿಲಿನ ತಾಪ ಭಕ್ತರನ್ನು ಕಾಡುತ್ತಿದ್ದರೂ, ಜನರ ಭಕ್ತಿ ಮತ್ತು ಉತ್ಸಾಹ ಕಡಿಮೆಯಾಗಿರಲಿಲ್ಲ. ವಿವಿಧ ಗ್ರಾಮಗಳ ರೈತರು ಪ್ರತಿ ವರ್ಷ ತಮ್ಮ ಎತ್ತುಗಳನ್ನು ಶೃಂಗರಿಸಿ, ಕಮಾನುಗಾಡಿಯಲ್ಲಿ ಪಾನಕದ ಹಂಡೆಗಳನ್ನು ಇಟ್ಟುಕೊಂಡು ವಾದ್ಯಗಳೊಂದಿಗೆ ಬರುವ ದೃಶ್ಯ ವಿರಳವಾಗಿತ್ತು. ಬೆರಳೆಣಿಕೆಯ ಪಾನಕದ ಬಂಡಿಗಳು ಮಾತ್ರ ಕಂಡು ಬಂದಿತು. ನವ ದಂಪತಿ, ಮಹಿಳೆಯರು ಮತ್ತು ಪುರುಷರು ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗ್ರಾಮ ದೇವತೆ ಏಕನಾಥೇಶ್ವರಿ ದೇವಿಯ ಸಿಡಿ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಶನಿವಾರ ಸಂಜೆ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಸಿಡಿ ಏರುವ ಭಕ್ತರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಸಿಡಿ ಕಂಬದ ಬಳಿ ಕರೆತರಲಾಯಿತು. ಕಂಬಕ್ಕೆ ದೊಡ್ಡೆಡೆ ಸೇವೆಯನ್ನು ಸಲ್ಲಿಸಿ, ಸಿಡಿ ಆಚರಿಸಲಾಯಿತು. ಸಿಡಿ ಕಂಬವನ್ನು ಏರಿದರೆ ಕುಟುಂಬಕ್ಕೆ ಒಳಿತಾಗುವುದು ಎಂಬ ನಂಬಿಕೆ ಭಕ್ತರಲ್ಲಿದೆ. ದೇವಿಗೆ ಉರುಳು ಹಾಗೂ ದಿಂಡು ಸೇವೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಸಂಜೆ ಗೋಧೋಳಿ ಸಮಯ ಪ್ರಾರಂಭವಾಗುತ್ತಿದ್ದಂತಯೇ 80 ಅಡಿ ಉದ್ದದ ಸಿಡಿ ಕಂಬದ ವೈಭವದ ಉತ್ಸವಕ್ಕೆ ಭಕ್ತರು ದೇವಿಯ ಜಯ ಘೋಷಣೆ ಕೂಗಿದರು. ಸಿಡಿ ಉತ್ಸವಕ್ಕೆ ಆಗಮಿಸಿದ್ದ ಭಕ್ತರು ಮಳೆ-ಬೆಳೆಗಾಗಿ ದೇವಿಯ ಮೊರೆ ಹೋದರು. ಉತ್ಸವ ಮೂರ್ತಿಯೊಂದಿಗೆ ಭಕ್ತರು ಹಲಗೆ ಮೇಳ ವಾದ್ಯ ಮೇಳ ಮತ್ತು ಕಲಾ-ಮೇಳಗಳೊಂದಿಗೆ ಹೆಜ್ಜೆ ಹಾಕಿದರು. ಸುಮಾರು 8 ರಿಂದ 10 ಜನ ಭಕ್ತರು ಸಿಡಿಯನ್ನು ಅಡಿದರು, ಇವರು ತಮ್ಮ ಇಷ್ಠಾರ್ಥವನ್ನು ಈಡೇರಿಸುವಂತೆ ದೇವಿಯಲ್ಲಿ ಹರಕೆಯನ್ನು ಹೊತ್ತಿದ್ದು,ಇದನ್ನು ಈಡೇರಿಸುವಂತೆ ಈ ಸಿಡಿಯನ್ನು ಅಡಲಾಗುತ್ತದೆ.

ಏಕನಾಥೇಶ್ವರಿಯ ಸಿಡಿ ಉತ್ಸವಕ್ಕೆ ಚಿತ್ರದುರ್ಗ ತಾಲ್ಲೂಕಿನ ಸುತ್ತಮುತ್ತಲಿನ ವಿವಿಧ ಗ್ರಾಮದ ಗ್ರಾಮಸ್ಥರು ಆಗಮಿಸುವುದರ ಮೂಲಕ ಸಿಡಿ ಉತ್ಸವಕ್ಕೆ ಮೆರಗು ನೀಡಿದರು. ಏ.13ರ ಭಾನುವಾರ ಸಾಯಂಕಾಲ 6-30ಕ್ಕೆ ಬೆಟ್ಟದ ಮೇಲೆ ಜೋಗತಿ ಮತ್ತು ಜೋಗಪ್ಪರಿಂದ ಓಕಳಿ ಉತ್ಸವ ಏ.15ರಂದು ಬೆಳಗ್ಗೆ 10-30ಕ್ಕೆ ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *