ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾ ಜಾತಿ ಬಡವರಿಗೂ ಮನೆಗಳನ್ನು ಕಟ್ಟಿಸಿಕೊಡಬೇಕೆಂಬ ಉದ್ದೇಶದಿಂದ ಹತ್ತು ಎಕರೆ ಹದಿನೈದು ಗುಂಟೆ ಜಮೀನು ಖರೀದಿಸಿ ನಗರಸಭೆ ಆಯುಕ್ತರ ಹೆಸರಿಗೆ ನೊಂದಣಿ ಮಾಡಿಸಿದ್ದರೂ ಇದುವರೆವಿಗೂ ನಮಗೆ ನಿವೇಶನವೂ ಇಲ್ಲ, ಮನೆಯೂ ಇಲ್ಲದಂತಾಗಿದೆ ಎಂದು ಜಿಲ್ಲಾ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್ಹುಸೇನ್ ದೂರಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾದಾರ ಚನ್ನಯ್ಯ ಗುರುಪೀಠದ ಸಮೀಪ ಕಳೆದ ಹದಿನೈದು ವರ್ಷಗಳ ಹಿಂದೆ ಜಮೀನು ಖರೀಧಿಸಿ ನಗರಸಭೆ ಪೌರಾಯುಕ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದೇವೆ. ಈಗ ಕೇಳಿದರೆ ಜಮೀನೆ ಇಲ್ಲ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರೆ. ಬಡ ಕಾರ್ಮಿಕರ ಆದಾಯ, ಆಧಾರ್ ಕಾರ್ಡ್ ಎಲ್ಲವನ್ನು ನಗರಸಭೆಗೆ ಎರೆಡೆರಡು ಬಾರಿ ನೀಡಿದ್ದೇವೆ. ಬಡ ಬಡಗಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳನ್ನು ಕಟ್ಟಿಸಿಕೊಡಬೇಕೆಂಬುದು ನಮ್ಮ ಆಸೆ. ಆದರೆ ನಗರಸಭೆಯವರು ಇದುವರೆವಿಗೂ ಸುಳ್ಳು ಭರವಸೆಗಳನ್ನು ನೀಡುತ್ತಲೆ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಆದಷ್ಟು ಬೇಗ ನಮ್ಮ ಜಮೀನಿನಲ್ಲಿ ಬಡ ಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ನಗರಸಭೆ ಪೌರಾಯುಕ್ತರಲ್ಲಿ ಮನವಿ ಮಾಡಿದರು.
ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ನಿವೇಶನಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಯಾವುದೇ ಸಬೂಬು ನಮಗೆ ಬೇಡ. ನಾವು ನೀಡಿರುವ ಜಮೀನಿನಲ್ಲಿ ನಿವೇಶನಗಳನ್ನು ವಿಂಗಡಿಸಿ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ಎ.ಜಾಕೀರ್ಹುಸೇನ್ ಆಗ್ರಹಿಸಿದರು.
ಚಂದ್ರಶೇಖರ್, ಅಸ್ಲಾಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

