ಬಸವೇಶ್ವರ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ : 12ನೇ ಶತಮಾನದಲ್ಲಿಯೇ ಮಹಿಳೆಗೆ ಹೆಚ್ಚಿನ ಆದ್ಯತೆ

1 Min Read

ಸುದ್ದಿಒನ್, ಚಿತ್ರದುರ್ಗ, ಮಾ.08 : ಮಹಿಳೆಯರ ಬಗ್ಗೆ ಕೇವಲ ಅನುಕಂಪ ತೋರಿಸಿದರೆ ಸಾಲದು ಸಮಾನ ಅವಕಾಶವನ್ನು ಪ್ರತಿ ಕ್ಷೇತ್ರದಲ್ಲಿ ನೀಡಿದಾಗ ಬಲಿಷ್ಠ, ಆರೋಗ್ಯಪೂರ್ಣ ಮತ್ತು ಸಮಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

 

ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಹಿಳೆ ಇಂದು ಎಲ್ಲ ರಂಗದಲ್ಲಿ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿರುವುದು ಮತ್ತು ಶಿಕ್ಷಣ ರಂಗದಲ್ಲಿ ಮೇಲುಗೈ ಸಾಧಿಸುತ್ತಿರುವುದು ಅವರೇ ಆಗಿದ್ದಾರೆ. ಹಾಗಾಗಿ ಪ್ರತಿಭೆಗೆ ತಕ್ಕ ಅವಕಾಶ ನೀಡಿದರೆ ಅಭಿವೃದ್ಧಿಯ ನಾಡು ನಿರ್ಮಾಣವಾಗಲು ಸಾಧ್ಯವಿದೆ. ಅದರಂತೆ ಮಹಿಳೆಗೆ ಅತ್ಯಂತ ಗೌರವ ಮತ್ತು ಉನ್ನತ ಸ್ಥಾನ ನೀಡಿದ್ದು 12ನೆಯ ಶತಮಾನ. ಹಾಗಾಗಿ ಲಿಂಗ ಅಸಮಾನತೆಯನ್ನು ತೊಡೆದು ಹಾಕಿದ್ದರಿಂದ 33 ಮಹಿಳೆಯರು ಅನುಭವ ಮಂಟಪದಲ್ಲಿ ಅವಕಾಶ ಪಡೆದು ಎಲ್ಲರೂ ವಚನ ರಚನೆ ಮಾಡಿದ್ದು ಬಹುದೊಡ್ಡ ಇತಿಹಾಸ ಎಂದರು.

ಹೆಣ್ಣು ಸಮಾಜದ ಕಣ್ಣು. ಆಕೆಗೆ ಸಂಸಾರದ ನೋಗ ಹೊತ್ತು ಅದನ್ನು ಸರಿಯಾಗಿ, ಜವಾಬ್ದಾರಿಯಿಂದ ನಿಭಾಯಿಸುವ ತಾಕತ್ತು ಇದೆ. ಅದಕ್ಕೆ ಮುಖ್ಯ ಕಾರಣ ಮಹಿಳೆಯಲ್ಲಿರುವ ತಾಳ್ಮೆ, ಸಹನೆ. ಮಹಿಳೆಯರು ಇನ್ನೂ ಕೂಡ ಸಮಾಜದಲ್ಲಿ ಕೆಲ ಕ್ಷೇತ್ರಗಳಲ್ಲಿ ಧೈರ್ಯದಿಂದ ಭಾಗವಹಿಸಲು ಮುಜುಗರ, ಅಂಜಿಕೆ ಪಡುತ್ತಿದ್ದು, ದಿಟ್ಟತನದಿಂದ ಎಲ್ಲ ರಂಗದಲ್ಲಿ ಭಾಗವಹಿಸಬೇಕು. ಇತ್ತೀಚೆಗೆ ಆಕೆ ಎಲ್ಲ ರಂಗದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಯಬೇಕೆಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಡೀನ್‍ರಾದ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್, ಡಾ. ಲತಾ, ಡಾ. ನಂದಿನಿ ಹಾಗೂ ಡಾ. ನಾಗೇಂದ್ರ ಗೌಡ ಅವರುಗಳು ಸೇರಿದಂತೆ ಕಾಲೇಜಿನ ಇತರ ವೈದ್ಯರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *