ಹಿರಿಯೂರು : ಜಿಲ್ಲೆಯಲ್ಲಿಯೇ ಧರ್ಮಪುರ ಹಾಲು ಉತ್ಪಾದಕ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವ ಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಿಶ್ರ ತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1990ರಲ್ಲಿ ಹಾಲು ಉತ್ಪಾದಕ ಸಹಕಾರ ಸಂಘವು ಪ್ರಾರಂಭವಾಗಿದ್ದು ಅಂದಿನಿಂದ ಇಂದಿನವರೆಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗುತ್ತಿದೆ ಎಂದರು.
ಈ ಸಂಘವು ಪ್ರತಿವರ್ಷ ರೈತರಿಗೆ ಸುಮಾರು 12 ರಿಂದ 15 ಲಕ್ಷ ಲಾಭವನ್ನು ತಂದುಕೊಡುತ್ತಿದೆ. ಸದರಿ ಹಾಲಿನ ಡೈರಿಯಿಂದ ರೈತರಿಗೆ ಹೆಚ್ಚಿನ 1 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿದೆ. ರಾಸುಗಳ ಸದೃಢ ಆರೋಗ್ಯಕ್ಕಾಗಿ ಒಕ್ಕೂಟದಿಂದ ಗುಣಮಟ್ಟದ ಔಷಧಿಗಳನ್ನು ನೀಡಲಾಗುತ್ತಿದೆ. ಈ ಸಂಘವು ಮತ್ತಷ್ಟು ಗುಣಮಟ್ಟದ ಹಾಲು ಉತ್ಪಾದಿಸುವ ಮಟ್ಟಕ್ಕೆ ಬೆಳೆಯಲಿ. ನಾವು ಸಹಕಾರ ನೀಡುತ್ತೇವೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮತ್ತೊಬ್ಬ ಶಿಮುಲ್ ನಿರ್ದೇಶಕ ಬಿ.ಆರ್. ರವಿಕುಮಾರ್ ಮಾತನಾಡಿ ಧರ್ಮಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯರು ಹಾಗೂ ಕಾರ್ಯಕರ್ತರು ಉತ್ತಮವಾಗಿ ಸಂಘದ ಒಳಿತಿಗಾಗಿ ಕೆಲಸ ಮಾಡುತ್ತಿರುವುದರಿಂದ ಗುರುತಿಸುವ ಸಂಘವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಧರ್ಮಪುರ ಎಂಬ ಹೆಸರು ಗಳಿಸಲಿ ಎಂಬುದು ನಮ್ಮ ಆಶಯವಾಗಿದೆ. ಹಣ ಕೊಟ್ಟು ಹಸುಗಳನ್ನು ತರುವ ಬದಲಿಗೆ, ಕರುಗಳ ಬೆಳವಣಿಗೆ ಆದ್ಯತೆ ನೀಡಿದಾಗ ರೈತರು ಹೆಚ್ಚು ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು. ಇದೇ ವೇಳೆ ಮಿಶ್ರ ತಳಿ ಹಸುಗಳನ್ನು ತುಂಬಾ ಚೆನ್ನಾಗಿ ಪೋಷಣೆ ಮಾಡಿರುವ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಕೃಷ್ಣಪ್ಪ, ಡಾ. ಮುಕುಂದ ನಾಯಕ್, ಡಾ. ನಾಗರಾಜ್, ಡಾ. ಧೀರಜ್ ಪ್ರಕಾಶ್, ಡಾ. ಸತ್ಯನಾರಾಯಣ, ಸಂಘದ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಮಾರುತಿ, ಮಾಜಿ ಅಧ್ಯಕ್ಷ ಭದ್ರಾಚಲ, ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.