Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | 2.13 ಕೋಟಿ ರೂ. ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

---Advertisement---

ಚಿತ್ರದುರ್ಗ. ಜ.04: ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ಅಪರಾಧ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆ ಬಲಪಡಿಸಲು ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಮತ್ತು ಪೊಲೀಸ್ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 139 ಪ್ರಕರಣಗಳಲ್ಲಿ ಒಟ್ಟು 2.13 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ, ವಾಹನ, ನಗದು, ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಹೀಗೆ ವಶಪಡಿಸಿಕೊಂಡ ವಸ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಿಂದಿರುಗಿಸುತ್ತಿರುವುದು ವಿಶೇಷ ಸಂದರ್ಭವಾಗಿದೆ. ಇದಕ್ಕೆ ಶ್ರಮಿಸಿದ ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಅಭಿನಂದನೆಗೆ ಅರ್ಹರು.

ಪೊಲೀಸರು ಇನ್ನೂ ಹೆಚ್ಚಿನ ಶ್ರಮ ತೆಗೆದುಕೊಂಡು ಅಪರಾಧಗಳನ್ನು ತಡೆಯಲು ಪ್ರಯತ್ನಿಸಬೇಕು. ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು ರೂ.5.27 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಈ ಪೈಕಿ 2.13 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಇಂದು ಮರಳಿಸಲಾಗುತ್ತಿದೆ. ಇದರೊಂದಿಗೆ ಪೊಲೀಸ್ ಜಾಗೃತಿ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ.

 

ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಅವಲೋಕಿಸಿದಾಗ ಇದರಲ್ಲಿ ಸಾಕಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಿತ್ತು. ಈ ಕುರಿತು ಮಹಿಳಾ ಪೊಲೀಸ್, ಸಂಚಾರಿ ಪೊಲೀಸ್ ಹಾಗೂ ಸೈಬರ್ ಪೊಲೀಸ್ ಠಾಣೆ ವತಿಯಿಂದ ಮಹಿಳೆಯರ ರಕ್ಷಣೆ, ಆಸ್ತಿ ವಿವಾದ, ಅಪಘಾತ, ಪೋಕ್ಸೋ, ಕಳವು ಮುಂತಾದ ಪ್ರಕರಣಗಳ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಸಶಸ್ತ್ರ ಮೀಸಲು ಪಡೆಯ ವತಿಯಿಂದ ಆಯುಧಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಚಿತ್ರದುರ್ಗ ಡಿವೈಎಸ್‍ಪಿ ದಿನಕರ್, ಚಳ್ಳಕೆರೆ ಡಿವೈಎಸ್‍ಪಿ ರಾಜಣ್ಣ, ಹಿರಿಯೂರು ಡಿವೈಎಸ್‍ಪಿ ಶಿವಕುಮಾರ್, ಚಿತ್ರದುರ್ಗದ ಸೈಬರ್ ಅಪರಾಧ ತಡೆ ಪೊಲೀಸ್ ಠಾಣೆ ಡಿವೈಎಸ್‍ಪಿ ಓಂಕಾರನಾಯಕ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು, ಸಬ್ ಇನ್ಸ್‍ಪೆಕ್ಟರ್‍ಗಳು ಭಾಗವಹಿಸಿದ್ದರು.

 

2 ಕೆ.ಜಿ. ಚಿನ್ನ ಹಾಗೂ 22 ಕೆ.ಜಿ. ಬೆಳ್ಳಿ ವಶ:
ಜಿಲ್ಲೆಯಾದ್ಯಂತ ಒಟ್ಟು 2 ಕೆ.ಜಿ, 158 ಗ್ರಾಂ ಚಿನ್ನ, 22 ಕೆ.ಜಿ., 654 ಗ್ರಾಂ ಬೆಳ್ಳಿ, 81 ದ್ವಿಚಕ್ರ ವಾಹನ, 3 ನಾಲ್ಕು ಚಕ್ರ ವಾಹನ, 3 ಲಘು ವಾಹನ, 4 ಭಾರಿ ವಾಹನ ಹಾಗೂ 430 ಮೊಬೈಲ್ ಫೋನ್‍ಗಳು ಸೇರಿದಂತೆ 210 ಪ್ರಕರಣಗಳಲ್ಲಿ ಒಟ್ಟಾರೆ 5.27 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಒಟ್ಟು ರೂ.2,13,81,667 ಮೌಲ್ಯದ ವಸ್ತುಗಳನ್ನು 653 ವಾರಸುದಾರಿಗೆ ಹಿಂದುರಿಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಪರಾಧ ತಡೆ ಮಾಸಾಚರಣೆ ಜಾಗೃತಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಡಿಎಆರ್ ಡಿವೈಎಸ್ಪಿ ಗಣೇಶ್ ಅವರು ಅಪರಾಧ ತಡೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಗಮನಸೆಳೆದ ವಸ್ತುಪ್ರದರ್ಶನ:
ವಿವಿಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಮಾರಂಭದ ಜೊತೆಗೆ ಸಾರ್ವಜನಿಕರಲ್ಲಿ ಅಪರಾಧ ತಡೆ, ರಸ್ತೆ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸಲು ವಿಶೇಷ ವಸ್ತುಪ್ರದರ್ಶನವನ್ನು ಇದೇ ಕವಾಯತು ಮೈದಾನದಲ್ಲಿ ಆಯೋಜಿಸಿದ್ದು, ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ವಸ್ತುಪ್ರದರ್ಶನದಲ್ಲಿ ಅಪರಾಧ ತಡೆಗಟ್ಟುವ ಕುರಿತು ಮಾರ್ಗಸೂಚಿ ಮತ್ತು ಸಲಹೆಗಳು, ವಿವಿಧ ಬಗೆಯ ಪೊಲೀಸ್ ಶಸ್ತ್ರಾಸ್ತ್ರಗಳ ಪ್ರದರ್ಶನ, ಶ್ವಾನದಳದ ಮಹತ್ವ ಕುರಿತು ವಸ್ತುಪ್ರದರ್ಶನ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟುವುದು, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳು, ರಸ್ತೆ ಅಪಘಾತಗಳ ವಿಡಿಯೋ ತುಣುಕುಗಳ ನಿರಂತರ ಪ್ರದರ್ಶನ ವ್ಯವಸ್ಥೆ, ವೈರ್‍ಲೆಸ್, ಕಂಟ್ರೋಲ್‍ರೂಂ ಮತ್ತು 112 ಸಹಾಯವಾಣಿ ಕಾರ್ಯನಿರ್ವಹಿಸುವ ಬಗೆ, ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, ಅಗ್ನಿ ಅವಘಡಗಳನ್ನು ತಡೆಗಟ್ಟಲು ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನ ಮುಂತಾದವುಗಳ ಬಗ್ಗೆ ಮಳಿಗೆಗಳನ್ನು ತೆರೆದು, ವಸ್ತುಪ್ರದರ್ಶನ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಶನಿವಾರದಂದು ನಗರದ ಹಲವು ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವಸ್ತುಪ್ರದರ್ಶನ ಮಳಿಗೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.  ವಸ್ತುಪ್ರದರ್ಶನವು ಭಾನುವಾರ ಸಂಜೆ 06 ಗಂಟೆಯವರೆಗೂ ಇರಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

 

ಪೊಲೀಸ್ ಕಾರ್ಯ ವೈಖರಿಗೆ ಸಾರ್ವಜನಿಕರ ಶ್ಲಾಘನೆ:

“ಸೀಬಾರ ಗ್ರಾಮದಲ್ಲಿ ನನ್ನ ಟ್ರ್ಯಾಕ್ಟರ್ ಟ್ರ್ಯಾಲಿ ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೆ. ಪೊಲೀಸರು ಟ್ರ್ಯಾಲಿ ಹುಡುಕಿ ಕೊಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕಳ್ಳತನವಾದ ಬಂಗಾರ, ಬೆಳ್ಳಿ, ವಾಹನ, ಮೊಬೈಲ್ ಫೋನ್‍ಗಳನ್ನು ಹುಡುಕಿ ವಾರಸುದಾರರಿಗೆ ತಲುಪಿಸಿದ್ದಾರೆ. ಪೊಲೀಸರಿಗೆ ನನ್ನ ಧನ್ಯವಾದಗಳು” ಎಂದು ನುಲೇನೂರು ಗ್ರಾಮದ ನೂಲೇಶ್ ಮಾಧ್ಯಮವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

“ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ಮೆರವಣಿಗೆ ವೇಳೆ 30 ಸಾವಿರ ಮೌಲ್ಯದ ನನ್ನ ವಿವೋ ವಿ23 ಸ್ಮಾರ್ಟ್ ಫೋನ್ ಕಳ್ಳತನವಾಗಿತ್ತು. ಈ ಬಗ್ಗೆ ದೂರು ದಾಖಲಿಸಿದ್ದೆ.  ಪೊಲೀಸರು ಮೊಬೈಲ್ ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಪೊಲೀಸ್ ಕಾರ್ಯ ಶ್ಲಾಘನೀಯವಾದದ್ದು” ಎಂದು ಚಿತ್ರದುರ್ಗ ನಗರದ ಕೆಳಗೋಟೆ ನಿವಾಸಿ ನಿರಂಜನ್ ಅಭಿಪ್ರಾಯ ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...