ಅಡಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿ : ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಸಲಹೆಗಳು

1 Min Read

ಸುದ್ದಿಒನ್, ಚಿತ್ರದುರ್ಗ,ಆ.24:  ಚಿತ್ರದುರ್ಗ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯು ಹೆಚ್ಚಾಗಿದ್ದು ಈ ಬೆಳೆಗೆ ಎಲೆ ಚುಕ್ಕೆ ರೋಗವು ಅತಿಯಾಗಿ ಕಂಡುಬರುತ್ತಿದೆ, ಹೀಗಾಗಿ ಎಲೆ ಚುಕ್ಕೆ ರೋಗ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.

 

ಎಲೆ ಚುಕ್ಕೆ ರೋಗ ತೀವ್ರವಾಗಿ, ಸೋಂಕಿತವಾಗಿರುವ ಕೆಳಗಿನ ಎಲೆಗಳನ್ನು ಸಾಧ್ಯವಿರುವಲ್ಲೆಲ್ಲಾ ತೆಗೆಯಬೇಕು ಮತ್ತು ಅವುಗಳನ್ನು ಸುಡಬೇಕು.
ಮಳೆಗಾಲದಲ್ಲಿ ಆಗಸ್ಟ್ ರಿಂದ ಸೆಪ್ಟಂಬರ್ ವರಗೆ ಕೊಳೆ ರೋಗಕ್ಕೆ ಅಡಿಕೆ ಗೊಂಚಲುಗಳಿಗೆ ಸಿಂಪಡಿಸಿದ ಬೋರ್ಡ್ ದ್ರಾವಣವನ್ನು 1% ಎಲೆ ಚುಕ್ಕೆ ರೋಗವಿರುವ ಗರಿಗಳಿಗೂ ಸಿಂಪಡಿಸಬೇಕು. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ರೋಗ ಕಂಡುಬಂದರೆ ಮೊದಲು ಸುತ್ತಿನ ಪ್ರೊಪಿಕೊನಜೋಲ್ 25% ಇ.ಸಿ 01 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಟೆಬುಕೊನಜೋಲ್ 01 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು, ರೋಗದ ತೀವ್ರತೆಗೆ ಅನುಗುಣವಾಗಿ 25 ರಿಂದ 30 ದಿನಗಳ ನಂತರ ಎರಡನೆ ಬಾರಿಗೆ ಪ್ರೋಪಿನೆಬ್ 70% ಡಬ್ಲ್ಯೂಪಿಯನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಷ್ಟು ಬೆರೆಸಿ ಸಿಂಪಡಿಸಬೇಕು.

ಶಿಲೀಂಧ್ರನಾಶಕ ದ್ರಾವಣವನ್ನು ತಯಾರಿಸಿದ ನಂತರ ಅಂಟು ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 01 ಮಿ.ಲೀ. ಸೇರಿಸಿ ಸಿಂಪಡಿಸಬೇಕು. ಪೋಷಕಾಂಶಗಳ ನಿರ್ವಹಣೆಗಾಗಿ, ಮಣ್ಣಿನ ಪರೀಕ್ಷೆಯ ದತ್ತಾಂಶದ ಆಧಾರದ ಮೇಲೆ ಶಿಫಾರಸು ಮಾಡಲಾದ ರಸಗೊಬ್ಬರಗಳು 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಒಂದು ವರ್ಷಕ್ಕೆ ಪ್ರತಿ ಗಿಡಕ್ಕೆ ಬಳಸಬಹುದು. ಸುಣ್ಣದ ಅನ್ವಯದೊಂದಿಗೆ ಮಣ್ಣಿನ ಪಿಹೆಚ್ ಅನ್ನು ತಟಸ್ಥವಾಗಿ ಹೊಂದಿಸಬಹುದು ಎಂದು ಚಿತ್ರದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks