ದೆಹಲಿ.ಸೆಪ್ಟೆಂಬರ್. 18: ದೇಶದ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ವಾರ್ಷಿಕ ₹6,000 ಪ್ರೋತ್ಸಾಹಧನವನ್ನು ಕಂತುಗಳ ರೂಪದಲ್ಲಿ ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತಿದೆ. ಈವರೆಗೆ 23 ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿರುವ ಕೇಂದ್ರ, ಇದೀಗ 24ನೇ ಕಂತಿನ ಹಣ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ಬೆನ್ನಲ್ಲೇ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.
ಮುಂದಿನ ಕಂತಿನ ಹಣ ರೈತರ ಕೈಸೇರಬೇಕಾದರೆ ‘ಫಾರ್ಮರ್ ರಿಜಿಸ್ಟ್ರಿ ವಿಶಿಷ್ಟ ಗುರುತಿನ ಸಂಖ್ಯೆ’ (Farmer ID) ಪಡೆಯುವುದು ಕಡ್ಡಾಯವಾಗಿದೆ. ಹಿಂದಿನ ಕಂತುಗಳ ಹಣ ಪಡೆದಿದ್ದರೂ, ಫಾರ್ಮರ್ ರಿಜಿಸ್ಟ್ರಿ ಮಾಡಿಸದಿದ್ದರೆ ಅಂತಹವರನ್ನು ಯೋಜನೆಯಿಂದ ಅನರ್ಹಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ರೈತರ ಆಧಾರ್ ಕಾರ್ಡ್
ಪಹಣಿ/ಆರ್ಟಿಸಿ (RTC) ಮತ್ತು ಜಮೀನಿನ ಕಂದಾಯ ದಾಖಲೆಗಳು
ಆಧಾರ್ ಕಾರ್ಡ್ ಲಿಂಕ್ (NPCI Seeding) ಆಗಿರುವ ಬ್ಯಾಂಕ್ ಖಾತೆಯ ವಿವರಗಳು
ವಿಶಿಷ್ಟ ಸಂಖ್ಯೆ (Farmer ID) ಪಡೆಯುವುದು ಹೇಗೆ?
ಹಂತ 1: ಅಧಿಕೃತ ಫಾರ್ಮರ್ ರಿಜಿಸ್ಟ್ರಿ ಪೋರ್ಟಲ್ ಅಥವಾ ಕೇಂದ್ರ ಕೃಷಿ ಇಲಾಖೆಯ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2: ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ, ಆಧಾರ್ ಸಂಖ್ಯೆ ನಮೂದಿಸಿ OTP ಮೂಲಕ ಪರಿಶೀಲನೆ (Authentication) ಪೂರ್ಣಗೊಳಿಸಿ.
ಹಂತ 3: ನಿಮ್ಮ ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿ, ಸರ್ವೆ ನಂಬರ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಭರ್ತಿ ಮಾಡಿ.
ಹಂತ 4: ನಿಮ್ಮ ಹೆಸರು, ವಿಳಾಸ ಮತ್ತು ಜಮೀನಿನ ವಿಸ್ತೀರ್ಣ ಸರಿಯಾಗಿದೆಯೇ ಎಂದು ಪರಿಶೀಲಿಸಿ ಅರ್ಜಿಯನ್ನು ಸಬ್ಮಿಟ್ ಮಾಡಿ.
ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ನಿಮ್ಮ ಮೊಬೈಲ್ ಸಂಖ್ಯೆಗೆ 11 ಅಂಕಿಗಳ ‘ಫಾರ್ಮರ್ ಐಡಿ’ ಬರಲಿದ್ದು, ಈ ಸಂಖ್ಯೆ ಹೊಂದಿರುವ ರೈತರಿಗೆ ಮಾತ್ರ ಮುಂದಿನ ಪಿಎಂ ಕಿಸಾನ್ ಹಣ ಖಾತೆಗೆ ಜಮೆಯಾಗಲಿದೆ.














