ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 12 : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರುಗಿದ ಶ್ರೀ ಕೃಷ್ಣನ ಬೃಹತ್ ಮೆರವಣಿಗೆ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಬಸವರಮಾನಂದ ಸ್ವಾಮೀಜಿ ಚಾಲನೆ ನೀಡಿದರು.
ನಗರದ ವೇದಾವತಿ ಬಡವಾಣೆಯ ಎ.ಕೃಷ್ಣಪ್ಪ ಸರ್ಕಲ್ ಸಮೀಪದಲ್ಲಿರುವ ಶ್ರೀಕೃಷ್ಣ ದೇವಸ್ಥಾನ ಮುಂಭಾಗದಲ್ಲಿ ವಿವಿಧ ಹೂವುಗಳಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿ ಕೂರಿಸಿದ ಶ್ರೀಕೃಷ್ಣ, ಆಂಜನೇಯ ಹಾಗೂ ಶ್ರೀರಾಮ ಪ್ರತಿಮೆಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭವಾಯಿತು. ಆದರೆ ಡಿಜೆ ಅನುಮತಿ ಸಿಗದ ಹಿನ್ನಲೆಯಲ್ಲಿ 12 ಗಂಟೆಗೆ ಆರಂಭವಾಗಬೇಕಿದ್ದ ಮೆರವಣಿಗೆ ಮಧ್ಯಾಹ್ನ 2 ಗಂಟೆ ನಂತರ ಮೆರವಣಿಗೆ ಆರಂಭವಾಯಿತು.
ಸಚಿವ ಕೆಹೆಚ್. ಮುನಿಯಪ್ಪ ಕಾರಿಗೆ ಅಡ್ಡ : ಡಿಜೆ ಬಾಕ್ಸ್ ವಿಚಾರ ಅನುಮತಿಗಾಗಿ ಪೊಲೀಸರು ಹಾಗೂ ಕಾರ್ಯಕ್ರಮ ಆಯೋಜಕರ ಮಧ್ಯೆ ಕೆಲ ಗಂಟೆಗಳ ಕಾಲ ಮಾತಿನ ಚಕಮಕಿ ಉಂಟಾಯಿತು. ಮೆರವಣಿಗಾರರು ಎಪಿಎಂಸಿ ಮುಂಭಾಗ ಹಾಗೂ ಪ್ರವಾಸಿ ಮಂದಿರ ಮುಂಭಾಗದಲ್ಲಿ ಹೆದ್ದಾರಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಸಮಧಾನವವಾಗದ ಯುವಕರು ಟಿಬಿ ವೃತ್ತದ ಬ್ರಿಡ್ಜ್ ಬಳಿ ಮತ್ತೆ ಪ್ರತಿಭಟನೆ ನಡೆಸಿ ಡಿಜೆ ಅನುಮತಿಗಾಗಿ ಘೋಷಣೆ ಕೂಗಿದರು. ಇದೇ ವೇಳೆ ಸಚಿವ ಕೆಹೆಚ್. ಮುನಿಯಪ್ಪ, ಮಾಜಿ ಸಂಸದ ಬಿಎನ್ ಚಂದ್ರಪ್ಪ ಹಾಗೂ ಮಾಜಿ ಸಚಿವ ಹೆಚ್. ಆಂಜನೇಯ ಪ್ರಯಾಣಿಸುತ್ತಿದ್ದ ಕಾರು ಬಂದವು. ಆದರೆ ಯುವಕರು ಕಾರಿಗೆ ಮುತ್ತಿಗೆ ಹಾಕಿ ಡಿಜೆ ಅನುಮತಿ ಕೊಡಬೇಕು ಎಂದು ಸುಮಾರು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಕಾರು ಅಡ್ಡಗಟ್ಟಿದರು. ಇದರಿಂದ ಸಚಿವರು ಕೆಲಕಾಲ ಟ್ರಾಫಿಕ್ ನಲ್ಲಿ ಉಳಿಯಬೇಕಾಯಿತು. ಸಚಿವರ ಅಧಿಕಾರಿಯೊಬ್ಬರು ಮನವೊಲಿಸಲು ಬಂದರು ಏನು ಪ್ರಯೋಜನವಾಗಲಿಲ್ಲ. ಮೆರವಣಿಗೆಗಾರರು ಸಚಿವರಿದ್ದ ಕಾರನ್ನು ಸುತ್ತುವರಿದು, ವರ್ಷಕ್ಕೊಮ್ಮೆ ಆಚರಿಸುವ ಹಬ್ಬ ಇದು ಪ್ರತಿವರ್ಷ ಶಾಂತಿಯುತವಾಗಿ ಆಚರಿಸುತ್ತಿದ್ದೇವು. ಆದರೆ ಈ ಬಾರಿ ಅನುಮತಿ ಈ ಬಾರಿ ಯಾಕೆ ಕೊಡುತ್ತಿಲ್ಲ. ಹಾಗಾಗಿ ಡಿಜೆ ಅನುಮತಿ ಕೊಡಿಸಬೇಕು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಮಾಜಿ ಸಚಿವ ಹೆಚ್. ಆಂಜನೇಯಗೆ ಮನವಿ ಮಾಡಿದರು. ಮಾಜಿ ಸಂಸದ ಬಿಎನ್ ಚಂದ್ರಪ್ಪ ಅವರು ಪೋನ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡುವುದು ಕಂಡು ಬಂತು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಚಿವರಿದ್ದ ಕಾರು ಹೋಗಲು ಅವಕಾಶ ಕಲ್ಪಿಸಿದರು. ಅಂತಿಮವಾಗಿ ನಾಲ್ಕು ಬಾಕ್ಸ್ ಉಳ್ಳ ಡಿಜೆ ಬಂದ ಬಳಿಕ ಮೆರವಣಿಗೆ ಕಳೆ ಬಂದಿತ್ತು.











