ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 11 : ನಾಳೆ(ಸೆಪ್ಟೆಂಬರ್. 12) ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಕೃಷ್ಣನ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ವೇದಾವತಿ ಬಡಾವಣೆಯಲ್ಲಿರುವ ಶ್ರೀ ಕೃಷ್ಣ ದೇವಾಲಯದಲ್ಲಿ ತಾಲೂಕು ಗೊಲ್ಲ ಸಮುದಾಯದ ಸಂಘಟನೆಗಳು ಏರ್ಪಡಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದೊಂದು ವಾರದಿಂದ ದೇವಾಲಯದಲ್ಲಿ ಶ್ರೀ ಕೃಷ್ಣ ಪರಮಾತ್ಮನಿಗೆ ದಿನನಿತ್ಯ ವಿಶೇಷ ಪೂಜೆ, ಪ್ರಸಾದ ವಿತರಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಶನಿವಾರ ಬೆಳಗ್ಗೆ 11.30 ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಈ ಭವ್ಯ ಶೋಭಾಯಾತ್ರೆಯಲ್ಲಿ ಅಲಂಕರಿಸಿದ ಬೆಳ್ಳಿ ರಥದಲ್ಲಿ ಶ್ರೀಕೃಷ್ಣ, ಶ್ರೀ ರಾಮ ಹಾಗೂ ಶ್ರೀ ಮಾರುತಿ ದೇವರುಗಳ ಮೆರವಣಿಗೆ ಸಾಗಲಿದೆ. ಜೊತೆಗೆ ಕೋಲಾಟ, ವೀರಗಾಸೆ, ಕಹಳೆ, ಹುರಿಮೆ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಬೆಳಿಗ್ಗೆ 11.30ಕ್ಕೆ ಶ್ರೀ ಕೃಷ್ಣ ದೇವಾಲಯದಿಂದ ಆರಂಭಗೊಂಡ ಶೋಭಾಯಾತ್ರೆಯು ಟಿಬಿ ವೃತ್ತದ ಮೂಲಕ ತಾಲೂಕು ಕಚೇರಿ, ಗಾಂಧಿ ಸರ್ಕಲ್, ಆಸ್ಪತ್ರೆ ಮುಂಭಾಗ ತಲುಪಿ ಅಲ್ಲಿಂದ ಮೂಲಕ ಚರ್ಚ್ ರೋಡ್, ಹುಳಿಯಾರು ರಸ್ತೆ ಮೂಲಕ ಗಾಂಧಿ ಸರ್ಕಲ್ ಪ್ರವೇಶಿಸಿ ನಂತರ ದೇವಾಲಯಕ್ಕೆ ಮೆರವಣಿಗೆ ವಾಪಸ್ ಹಿಂತಿರುಗುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ತಾಲ್ಲೂಕಿನ ಶ್ರೀ ಕೃಷ್ಣನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









