ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಶಿಕ್ಷಕ ವೃತ್ತಿಯಿಂದ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನೇರಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಶಿಕ್ಷಕರ ಪಾಲಿಗೆ ಸುದಿನ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಒಕ್ಕೂಟದ ರಾಜ್ಯಾಧ್ಯಕ್ಷ
ಕೆ.ಸಿ.ಲೋಕೇಶ್ ಗುಣಗಾನ ಮಾಡಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಮೀಪ ಸಂಗಮೇಶ್ವರ ಬಡಾವಣೆಯಲ್ಲಿರುವ ಒಕ್ಕೂಟದ ಜಿಲ್ಲಾ ಘಟಕದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
2018 ರಲ್ಲಿ ಸಂಘಟನೆ ಆರಂಭವಾಯಿತು. ಮೂರು ಸಾವಿರ ಸದಸ್ಯರುಗಳಿಂದ ಸಂಗ್ರಹವಾಗಿರುವ 28 ಲಕ್ಷ ರೂ.ಗಳು ಬ್ಯಾಂಕ್ನಲ್ಲಿ ಸುರಕ್ಷಿತವಾಗಿದೆ. ವಿದ್ಯಾರ್ಥಿಗಳನ್ನು
ತನ್ನ ಕಡೆ ಸೆಳೆದುಕೊಳ್ಳುವುದಕ್ಕಿಂತ ಅವರ ಭವಿಷ್ಯವನ್ನು ಅವರೆ ರೂಪಿಸಿಕೊಳ್ಳುವಂತೆ ಉತ್ತೇಜಿಸುವವನೆ ನಿಜವಾದ ಶಿಕ್ಷಕ. ಜ್ಞಾನಕ್ಕೆ ನಿವೃತ್ತಿಯಿಲ್ಲ. ಅನುಭವಕ್ಕೆ ವಯಸ್ಸಿಲ್ಲ. ಸಮಾಜಕ್ಕೆ ಕೊಡುಗೆ ಕೊಡುವ ಅವಕಾಶ ಶಿಕ್ಷಕರುಗಳಿಗೆ ಮಾತ್ರ ಸಿಕ್ಕಿದೆ. ಸಂಘಟನೆಯನ್ನು ಶಕ್ತಿಶಾಲಿಯನ್ನಾಗಿಸೋಣ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿವೃತ್ತ ಶಿಕ್ಷಕರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಹೆಚ್.ಕೃಷ್ಣಮೂರ್ತಿ ಮಾತನಾಡಿ ತಂದೆ-ತಾಯಿಗಳ ನಂತರ ಗುರುವಿಗೆ ಮಹತ್ವವಾದ ಸ್ಥಾನವಿದೆ. ಸ್ವಾರ್ಥ ಸಮಾಜದಲ್ಲಿ ಎಲ್ಲರೂ ಬೇರೆಯವರನ್ನು ಬಳಸಿಕೊಂಡು ಬೆಳೆಯುತ್ತಿದ್ದರೆ ಶಿಕ್ಷಕ ಮಾತ್ರ ಮತ್ತೊಬ್ಬರನ್ನು ಬೆಳೆಸಿ ತಾನು ಬೆಳೆಯುತ್ತಾನೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರು ಶಿಕ್ಷಕರಾಗಿದ್ದುಕೊಂಡು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಅಂತಹ ಮಹಾತ್ಮನ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಶಿಕ್ಷಕರುಗಳಿಗೆ ದೊರಕಿರುವ ಪುಣ್ಯ ಎಂದು ಶ್ಲಾಘಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಮಹಂತೇಶ್, ಕಾರ್ಯದರ್ಶಿ ಡಾ.ಗೋಪಾಲಪ್ಪ, ಪ್ರಭುದೇವ್ ಇವರುಗಳು ವೇದಿಕೆಯಲ್ಲಿದ್ದರು. ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರಾದ ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಹೆಚ್.ಎಸ್.ಟಿ.ಸ್ವಾಮಿ ಹಾಗೂ ಒಕ್ಕೂಟದ ಸದಸ್ಯರುಗಳು ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ನಿವೃತ್ತ ಪ್ರಾಚಾರ್ಯರಾದ ಎ.ಎಂ.ರುದ್ರಪ್ಪ ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲರಾದ ಪ್ರೊ.ಹೆಚ್.ಗೋಪಾಲಪ್ಪ ಸ್ವಾಗತಿಸಿದರು. ಓಂಕಾರಪ್ಪ ವಂದಿಸಿದರು. ಜಿ.ಎನ್.ಬಸವರಾಜಪ್ಪ ನಿರೂಪಿಸಿದರು. ಎಪ್ಪತ್ತು ಎಂಬತ್ತು ವರ್ಷ ತುಂಬಿರುವ ನಿವೃತ್ತರನ್ನು ಸನ್ಮಾನಿಸಲಾಯಿತು.











