ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ಕೇಂದ್ರ ರಸ್ತೆ ಮತ್ತು ಮೂಲಸೌಲಭ್ಯ ನಿಧಿಯಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಒಟ್ಟು 23 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಕ್ಷೇತ್ರದ ವಿವಿಧ ತಾಲೂಕುಗಳ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈ ಅನುದಾನ ಬಳಕೆಯಾಗಲಿದೆ. ಮಂಜೂರಾದ ಕಾಮಗಾರಿಗಳಿಗೆ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಹೆದ್ದಾರಿ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಶಿಫಾರಸ್ಸಿನ ಮೇರೆಗೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ.
ಯಾವ ತಾಲೂಕಿಗೆ ಎಷ್ಟು ಅನುದಾನ?
ಚಿತ್ರದುರ್ಗ ತಾಲೂಕು:
ಜಾನುಕೊಂಡ-ಬುರುಜನರೊಪ್ಪ ರಸ್ತೆಯಿಂದ ಅನ್ನೇಹಾಳ್-ವಡ್ಡರಹಟ್ಟಿ ಮಾರ್ಗವಾಗಿ ಉಪ್ಪನಾಯಕನಹಳ್ಳಿ, ಓಬೇನಹಳ್ಳಿ, ನಂದೀಪುರ, ಸೊಂಡೇಕೊಳ, ಗೊಡಬನಾಳ್ ಹಾಗೂ ಮುಸಂಡಿಹಾಳ್ ಸಂಪರ್ಕಿಸುವ ರಸ್ತೆಯ ಆಯ್ದ ಭಾಗಗಳ ಅಭಿವೃದ್ಧಿಗೆ ₹3 ಕೋಟಿ ಮಂಜೂರಾಗಿದೆ.
ಚಳ್ಳಕೆರೆ ತಾಲೂಕು:
ದೊಡ್ಡೇರಿಯಿಂದ ಓಬೇನಹಳ್ಳಿ ಸಂಪರ್ಕಿಸುವ ರಸ್ತೆಯ ವಿವಿಧ ಕಿ.ಮೀ. ವ್ಯಾಪ್ತಿಯಲ್ಲಿ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟ, ಕೋನಿಹಾರಹಳ್ಳಿ, ಗೋಸಿಕೆರೆ ಕಾವಲ್ ಹಾಗೂ ಗೋಸಿಕೆರೆ ಚಿಕ್ಕಚೆಲ್ಲೂರು ಮಾರ್ಗಗಳ ರಸ್ತೆ ಅಭಿವೃದ್ಧಿಗೆ ₹3 ಕೋಟಿ ಅನುದಾನ ನೀಡಲಾಗಿದೆ.
ಮೊಳಕಾಲ್ಮೂರು ತಾಲೂಕು:
ನಾಯಕನಹಟ್ಟಿಯಿಂದ ತೊರೆಕೋಲಮ್ಮನಹಳ್ಳಿ ಸಂಪರ್ಕಿಸುವ ರಸ್ತೆಯ 0.00ರಿಂದ 10.50 ಕಿ.ಮೀ. ವ್ಯಾಪ್ತಿಯಲ್ಲಿ ಗುಂತಕೋಲ್ಲಮ್ಮನಹಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿಗೆ ₹3 ಕೋಟಿ ಮಂಜೂರಾಗಿದೆ.
ಹಿರಿಯೂರು ತಾಲೂಕು:
ಚಳ್ಳಕೆರೆ-ವಿಶ್ವನಾಥನಹಳ್ಳಿ ಸಂಪರ್ಕಿಸುವ ರಸ್ತೆಯ ವಿವಿಧ ಆಯ್ದ ಭಾಗಗಳಲ್ಲಿ ಪರಶುರಾಮ ದೇವರಕೋಟೆ, ಧರ್ಮಪುರ, ಸಕ್ಕರ, ದ್ವಾರನಕುಂಟೆ, ಕೋಡಿಹಳ್ಳಿ, ಇಕ್ಕನೂರು, ಪಿಟ್ಲಾಲಿ, ಆದಿವಾಲ, ಹಿರಿಯೂರು, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಕುರುಬರಹಳ್ಳಿ ಹಾಗೂ ಭರಮಗಿರಿ ಮಾರ್ಗಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ ನೀಡಲಾಗಿದೆ.
ಹೊಸದುರ್ಗ ತಾಲೂಕು:
ಶಿವಗಂಗಾದಿಂದ ಅಮ್ಮನಹಟ್ಟಿ ರಸ್ತೆಯ ವಿವಿಧ ಭಾಗಗಳಲ್ಲಿ ಮದ್ದೇರು, ತಾಳ್ಯ, ಕುಮ್ಮಿನಗಟ್ಟ, ಜಾನಕಲ್-ಹೊಸದುರ್ಗ, ಹಾಗಲಕೆರೆ, ಮತ್ತೋಡು, ವಡ್ಡರಹಟ್ಟಿ, ಕಿಟ್ಟದಹಳ್ಳಿ ಹಾಗೂ ಚಿಕ್ಕಬ್ಯಾಲದಕೆರೆ ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ₹3 ಕೋಟಿ ಮಂಜೂರಾಗಿದೆ.
ಹೊಳಲ್ಕೆರೆ ತಾಲೂಕು:
ಕಡೂರು-ಹಿರೇನಲ್ಲೂರು-ಅಜ್ಜಂಪುರ-ಯರಗನಹಳ್ಳಿ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲು ₹3 ಕೋಟಿ ಅನುದಾನ ನೀಡಲಾಗಿದೆ.
ಸಿರಾ ತಾಲೂಕು:
ಪಟ್ಟನಾಯಕನಹಳ್ಳಿ, ಬರಗೂರು ಹಾಗೂ ಹಾರೋಗೆರೆ ಮಾರ್ಗವಾಗಿ ರಾಜ್ಯ ಹೆದ್ದಾರಿ-48ರಿಂದ ಆಂಧ್ರಪ್ರದೇಶ ಗಡಿಗೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ₹2.50 ಕೋಟಿ ಮಂಜೂರಾಗಿದೆ.
ಪಾವಗಡ ತಾಲೂಕು:
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಿರುಪಸಮುದ್ರ ಗ್ರಾಮದ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ ಗಡಿಯಿಂದ ರಾಜ್ಯ ಹೆದ್ದಾರಿ-73 ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ₹2.50 ಕೋಟಿ ಅನುದಾನ ನೀಡಲಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.













