ಚಿತ್ರದುರ್ಗ: ನಗರದ ಆರ್ ಟಿಓ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಇದೀಗ ಆಕರ್ಷಕ ಗೋಡೆ ಬರಹಗಳಿಂದ ಗಮನ ಸೆಳೆಯುತ್ತಿದೆ. ನಗರಸಭೆ ವತಿಯಿಂದ ಅಂಡರ್ ಪಾಸ್ ನ ಗೋಡೆಗಳ ಮೇಲೆ ವಿವಿಧ ಚಿತ್ರಗಳು ಹಾಗೂ ಜಾಗೃತಿ ಸಂದೇಶಗಳನ್ನು ರಚಿಸಲಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ಅಂಡರ್ ಪಾಸ್ ನ ಎರಡೂ ಗೋಡೆಗಳ ಮೇಲೆ ಸಿನಿಮಾ ಸೇರಿದಂತೆ ವಿವಿಧ ಪೋಸ್ಟರ್ಗಳನ್ನು ಅಂಟಿಸಲಾಗುತ್ತಿತ್ತು. ಇದರಿಂದ ಗೋಡೆಗಳು ಅಂದಗೆಟ್ಟಿದ್ದವು. ಇದೀಗ ನಗರಸಭೆ ಕೈಗೊಂಡಿರುವ ಗೋಡೆ ಬರಹದ ಮೂಲಕ ಅಂಡರ್ ಪಾಸ್ ಗೆ ಹೊಸ ರೂಪ ನೀಡುವುದರ ಜೊತೆಗೆ ನಾಗರಿಕರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಅಂಡರ್ ಪಾಸ್ ನ ಒಂದು ಗೋಡೆಯ ಮೇಲೆ ಚಿತ್ರದುರ್ಗದ ಹೆಮ್ಮೆಯ ಕಲ್ಲಿನ ಕೋಟೆಯ ಸುಂದರ ಚಿತ್ರವನ್ನು ಬಿಡಿಸಲಾಗಿದ್ದು, ಅದರೊಂದಿಗೆ ‘ಸ್ವಚ್ಛ ಸರ್ವೇಕ್ಷಣ 2026’ ಎಂಬ ಸಂದೇಶವನ್ನು ಮೂಡಿಸಲಾಗಿದೆ. ಚಿತ್ರದುರ್ಗದ ಐತಿಹಾಸಿಕ ಪರಂಪರೆಯನ್ನು ಪರಿಚಯಿಸುವುದರ ಜೊತೆಗೆ ಸ್ವಚ್ಛತೆಯ ಮಹತ್ವವನ್ನು ಸಾರುವಂತಿದೆ.
ಮತ್ತೊಂದು ಗೋಡೆಯ ಮೇಲೆ ವಿವಿಧ ಜಾಗೃತಿ ಸಂದೇಶಗಳೊಂದಿಗೆ ಚಿತ್ರಗಳನ್ನು ರಚಿಸಲಾಗಿದೆ. ಹೊಸ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸಿ, ಗಿಡಗಳನ್ನು ಬೆಳೆಸಿ ನಾಡು ಉಳಿಸಿ, ನೀರನ್ನು ಮಿತವಾಗಿ ಬಳಸಿ, ಪ್ಲಾಸ್ಟಿಕ್ ಬೇಡ–ಬಟ್ಟೆ ಚೀಲ ಬಳಸಿ ಎಂಬ ಸಂದೇಶಗಳನ್ನು ನೀಡಲಾಗಿದೆ.

ಅಂಡರ್ ಪಾಸ್ ನ ಗೋಡೆಗಳನ್ನು ಕೇವಲ ಅಲಂಕಾರಕ್ಕಾಗಿ ಬಳಸದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವೇದಿಕೆಯನ್ನಾಗಿ ರೂಪಿಸಿರುವ ನಗರಸಭೆಯ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋಡೆಗಳು ಸ್ವಚ್ಛವಾಗಿರುವುದರ ಜೊತೆಗೆ ಸಂದೇಶಗಳನ್ನು ಸಾರುವಂತಾಗಿರುವುದು ನಗರದ ಸೌಂದರ್ಯಕ್ಕೂ ಮತ್ತಷ್ಟು ಮೆರುಗು ತಂದಿದೆ.












